ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದು ಶತಃಸಿದ್ಧ: ಪರಂ
ಬೆಂಗಳೂರು, ಆಗಸ್ಟ್ 29: ರಾಜ್ಯ ಸಮ್ಮಿಶ್ರ ಸರ್ಕಾರವು ಯಶ್ವಿಯಾಗಿ ನೂರು ದಿನವನ್ನು ಪೈರೈಸಿದೆ ಹೀಗೆಯೇ ಯಾವುದೇ ಗೊಂದಲವಿಲ್ಲದೆ ಐದು ವರ್ಷಗಳನ್ನು ಪೂರೈಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯವನಿಕಾದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮಿಶ್ರ ಸರಕಾರ ಇಂಥ ಸಂವತ್ಸರದಲ್ಲೇ ಬೀಳಲಿದೆ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ, ನಾವು ೧೦೦ ದಿನಗಳನ್ನೇ ಪೂರೈಸಿದ್ದೀವಿ. ಈ ಸರಕಾರ ಸುಭದ್ರವಾಗಿದ್ದು ಐದು ವರ್ಷವನ್ನೂ ಪೂರ್ಣಗೊಳಿಸಲಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ, 5 ಕಾರಣಗಳು!
ಈ ನೂರು ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡಿದ್ದೇವೆ. ಕಳೆದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಘೋಷಿಸಿದ್ದ ಆಯವ್ಯಯವನ್ನು ಮುಂದುವರೆಸಿದ್ದೇವೆ.
ಸಿದ್ದರಾಮಯ್ಯ ಸಿಎಂ ಆಗಲು ಐದು ವರ್ಷ ಕಾಯಬೇಕು: ಡಿಕೆಶಿ ಟಾಂಗ್
ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿದ್ದೇವೆ. ಈ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ರೈತರ 31 ಸಾವಿರ ಕೋಟಿರೂ.ಸಾಲಮನ್ನಾ ಅನುಷ್ಠಾನಕ್ಕೆ ಸಿದ್ಧಗೊಂಡಿದೆ. ಇದರ ಜೊತೆಗೆ ಖಾಸಗಿ ಸಾಲ, ಕೈ ಸಾಲವನ್ನೂ ಸಹ ಮನ್ನಾ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಬಹಳಷ್ಟು ರೈತರು ಕೈಸಾಲ ತೀರಿಸಲು ಹೈರಾಣಾಗಿದ್ದಾರೆ. ಅದಕ್ಕಾಗಿಯೇ ಕೈಸಾಲ ಮನ್ನಾ ಮಾಡಲು ಹೊರಟಿದ್ದೇವೆ. ಈ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ನೆರೆ, ಬರಕ್ಕೆ ಕೇಂದ್ರದಿಂದ ಬಿಡಿಗಾಸೂ ದೊರೆತಿಲ್ಲ
13 ಜಿಲ್ಲೆಗಳಲ್ಲಿ ಬರವಿದ್ದರೆ, ಕೊಡಗು, ಮಡಿಕೇರಿ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಅತಿವೃಷ್ಠಿ ಎದುರಾಗಿ, ಸಾಕಷ್ಟು ಜನ ನಿರಾಶ್ರಿತರಾದರು. ಇವರ ನೆರವಿಗೆ ರಾಜ್ಯ ಸರಕಾರ ಕೂಡಲೇ ಧಾವಿಸಿ, ಎಲ್ಲ ವ್ಯವಸ್ಥೆ ಮಾಡಿದೆ. ಆದರೆ ಕೇಂದ್ರ ಸರಕಾರದಿಂದ ಸಣ್ಣ ಹಣಕಾಸಿನ ನೆರವೂ ನಮಗೆ ಸಿಕ್ಕಿಲ್ಲ. ಕೇರಳ ನೆರೆ ಹಾವಳಿಗೆ ಪ್ರಧಾನಿ ಖುದ್ದು ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದರು. ಆದರೆ ಕೊಡಗನ್ನು ನಿರ್ಲಕ್ಷಿಸಿದರು ಎಂದರು.
ಕೇಂದ್ರ ಗೃಹ ಸಚಿವರ ಭೇಟಿ
ಕೊಡಗು ನೆರೆ ಪರಿಸ್ಥಿತಿಗೆ ನೆರವು ನೀಡುವಂತೆ ಗುರುವಾರ ಮುಖ್ಯಮಂತ್ರಿ ಅವರೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹಣಕಾಸಿನ ನೆರವಿಗೆ ಮನವಿ ಮಾಡಲಾಗುವುದು. ಈಗಾಗಲೇ ಎರಡು ಸಾವಿರ ಕೋಟಿ ರು. ಕೇಳಿದ್ದೇವೆ ಎಂದರು.
ನಗರಭಿವೃದ್ಧಿ ಸಚಿವರಾದ ಬಳಿಕ ಸಾಕಷ್ಟು ಕೆಲಸ ಮಾಡಲಾಗಿದೆ. 8 ಕಿ.ಮೀ. ಅನಧಿಕೃತ ಕೇಬಲ್ ತೆರವು, ಫ್ಲೆಕ್ಸ್ ತೆರವು, ನಾಡಪ್ರಭು ಕೆಂಪೇಗೌಡ ಲೇಔಟ್ ನಿವೇಶನ ಹಂಚಿಕೆ ಪ್ರಕ್ರಿಯೆ ಸೇರಿ ಹಲವು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿದ್ದೇವೆ.
ಹೊಸದಾಗಿ ಪೆರಿಫರಲ್ ರಿಂಗ್ ರಸ್ತೆ ಮಾಡಲು ತ್ವರಿತ ಗತಿಯಲ್ಲಿ ಕೆಲಸ ಕೈಗೊಂಡಿದ್ದು, 13,500 ಕೋಟಿ ರು. ವೆಚ್ಚದಲ್ಲಿ ಮಾಡಲಾಗುತ್ತಿದೆ. ಜತೆಗೆ ಎರಡು ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಡಿಪಿಆರ್ ಆಗಿದೆ ಎಂದು ವಿವರಿಸಿದರು.
ಜಿಲ್ಲೆಗಳಲ್ಲಿನ ಕೆಲಸಗಳಿಗೆ ಚುರುಕು ಮುಟ್ಟಿಸಲು ಡಿಸಿ ಹಾಗೂ ಸಿಇಒಗಳ ಸಭೆ ಮಾಡಲಾಯಿತು. ಒಟ್ಟಾರೆ ಈ 100 ದಿನದಲ್ಲಿ ರಾಜ್ಯ ಸಮ್ಮಿಶ್ರ ಸರಕಾರ ಸುಗಮವಾಗಿ ನಡೆದಿದೆ ಎಂದರು.
ಬಿಜೆಪಿ ಫೋನ್ ಟ್ರಾಪ್ ಆಗಿಲ್ಲ
ಯಾವ ರಾಜಕಾರಣಿ ಫೋನ್ ನನ್ನು ಅನಧಿಕೃತವಾಗಿ ಟ್ರಾಪ್ ಮಾಡಲಾಗಿಲ್ಲ ಎಂದು ಪರಮೇಶ್ವರ ಅವರು ಸ್ಪಷ್ಟ ಪಡಿಸಿದರು. ಸ್ಥಳೀಯ ಚುನಾವಣೆ ಮುಗಿದ ಬಳಿಕವೇ ಸಚಿವ ಸಂಪುಟ ಹಾಗೂ ನಿಗಮ ಮಂಡಳಿ ಅಧ್ಯಕ್ಷರುಗಳ ನೇಮಕ ಮಾಡಲಾಗುವುದು ಎಂದರು.
ಡ್ಯಾಮೇಜ್ ಕಂಟ್ರೋಲ್
ಉತ್ತರ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಣಿಸಲು ಬಿಜೆಪಿ ಅವರು ಆ ಭಾಗದ ಕಾಂಗ್ರೆಸ್ ನಾಯಕರನ್ನು ತಮ್ಮಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ನಲ್ಲಿ ಇಂಥ ನಡವಳಿಕೆ ಇದ್ದರೆ ಡ್ಯಾಮೇಜ್ ಕಂಟ್ರೋಲ್ ಮಾಡಲಾಗುವುದು. ಕಾಂಗ್ರೆಸ್ ಗೆ ಇದೇನು ಹೊಸದಲ್ಲ ಎಂದು ಹೇಳಿದರು.