ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ
ಬೆಂಗಳೂರು, ಆಗಸ್ಟ್ 24: ಕೇಂದ್ರ ಸರ್ಕಾರ ಕೇರಳಕ್ಕೊಂದು ನೀತಿ, ಕರ್ನಾಟಕಕ್ಕೊಂದು ನೀತಿ ಅನುಸರಿಸುತ್ತಾ ಮಲತಾಯಿ ಧೋರಣೆ ತೋರುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಕೊಡಗು ಮರುನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧವಿದೆ.
ಕೊಡಗು ಪ್ರವಾಹ ಹಿನ್ನೆಲೆ ಸಮನ್ವಯ ಸಮಿತಿ ಮುಂದಕ್ಕೆ: ಪರಮೇಶ್ವರ್
ಅಲ್ಲಿನ ಅನಾಹುತ, ಹಾನಿ ಬಗ್ಗೆ ಆದ್ಯತೆ ಮೇಲೆ ಸರಿ ಮಾಡಲಾಗುವುದು. ಕೇಂದ್ರ ಸರಕಾರ ಹಣಕಾಸಿನ ನೆರವು ಕೊಟ್ಟಿಲ್ಲ. ನಮ್ಮ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿಲ್ಲ. ಕನಿಷ್ಠ ಪಕ್ಷ ಆತ್ಮಸ್ಥೈರ್ಯವನ್ನಾದರೂ ತುಂಬಿದ್ದರೆ ಅಲ್ಲಿನ ನಿರಾಶ್ರಿತರಿಗೂ ನೆಮ್ಮದಿ ಇರುತ್ತಿತ್ತು. ಆದರೆ ಕೇಂದ್ರ ಸರಕಾರ ಕೇರಳಕ್ಕೆ ಮಾತ್ರ ಹಣಕಾಸಿನ ನೆರವು ನೀಡಿ, ನಮಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.
ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕೊರತೆ ಕುರಿತು ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಎಲ್ಲ ಪೊಲೀಸ್ ಠಾಣೆಯಲ್ಲು ಅಗತ್ಯ ಶಸ್ತ್ರಾಸ್ತ್ರ ಗಳಿವೆ. ಆದರೂ ಸಿಎಜಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.