ಬೆಂಗಳೂರು: ಏರ್ಪೋರ್ಟ್ ಬಳಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ ಡಿಸಿ
ಬೆಂಗಳೂರು, ಜು.7: ಬೆಂಗಳೂರು ನಗರ ಜಿಲ್ಲಾಡಳಿತದಿಂದ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ನೂತನ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ಶನಿವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗವಿರುವ ರಾಜಕಾಲುವೆಯನ್ನು ತೆರವುಗೊಳಿಸಲಾಗಿದೆ. ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ವಿಜಯ್ ಶಂಕರ್ ಅವರ ಮೊದಲ ಆಪರೇಷನ್ ಇದಾಗಿದೆ.
ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್
ಬಂಡಿಕೊಡಿಗೆಹಳ್ಳಿಯಲ್ಲಿ ಈ ರಾಜಕಾಲುವೆಯಿದ್ದು, ಏರ್ಪೋರ್ಟ್ನಿಂದ ನೀರು ಹೊರ ಹೋಗುವ ರಾಜಕಾಲುವೆ ಸುಮಾರು 35 ಗುಂಟೆಯ 1 ಕಿ.ಮೀ ವ್ಯಾಪ್ತಿಯದ್ದಾಗಿತ್ತು.
ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಆರಂಭಶೂರತ್ವ ತೋರಿದ್ದ ಬಿಬಿಎಂಪಿ, ಇದೀಗ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 728 ಕಡೆ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಅದನ್ನು ಕೈಗೊಳ್ಳದೆ ಅಧಿಕಾರಿಗಳು ಕುಂಟು ನೆಪ ಹೇಳಿ ಸ್ಥಗಿತಗೊಳಿಸಿದ್ದರು.
1,953 ಕಡೆ ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಬಿಬಿಎಂಪಿ ನಾಲ್ಕು ವರ್ಷಗಳ ಹಿಂದೆಯೇ ಗುರುತಿಸಿತ್ತು. ಅದರಲ್ಲಿ ಕಳೆದ ವರ್ಷ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವುದಕ್ಕೆ ಮುನ್ನವೇ 820 ಕಡೆ ತೆರವು ಮಾಡಲಾಗಿತ್ತು. ಉಳಿದ 1,133 ಕಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿತ್ತು. ಕಳೆದ ವರ್ಷದ ಕಾರ್ಯಾಚರಣೆ ಆರಂಭವಾದಾಗಿನಿಂದ ಈವರೆಗೆ 405 ಕಡೆ ಒತ್ತುವರಿ ತೆರವು ಮಾಡಲಾಗಿತ್ತು.