ಸೇವೆ ಖಾಯಂಗೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ
ಬೆಂಗಳೂರು, ಫೆಬ್ರವರಿ 20 : ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಿ ಸೇವೆಯನ್ನು ಖಾಯಂಗೊಳಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಗುತ್ತಿಗೆ, ದಿನಗೂಲಿ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ಅನಿರ್ದಿಷ್ಟ ಮುಷ್ಕರ ಅರಂಭಿಸಿದ್ದಾರು.
ರಾಜ್ಯದ ಅನೇಕ ಜಿಲ್ಲೆಗಳಿಂದ ಎಲ್ಲಾ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ನಗರದ ರೈಲ್ವೇ ನಿಲ್ದಾಣದಲ್ಲಿ ಸಂಘಟನೆಗೊಂಡು ಫ್ರೀಡಂಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅನಿರ್ಧಿಷ್ಟ ಮುಷ್ಕರ ಕೈಗೊಂಡರು. ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಆಶ್ರಯದಲ್ಲಿ ಗುತ್ತಿಗೆ ಮತ್ತು ದಿನಗೂಲಿ ನೌಕರರು, ದಿನಗೂಲಿಯಿಂದ ಖಾಯಂಗೊಂಡ ನೌಕರರು, ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಸುಮಾರು 1.5 ಲಕ್ಷ ಸಂಖ್ಯೆಯಲ್ಲಿ ಈ ನೌಕರರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರು ಸೇರಿದ್ದಾರೆ. ಮಹಿಳೆಯರು ಸೇರಿದಂತೆ ನೂರಾರು ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು , ಗುತ್ತಿಗೆ ಪದ್ದತಿ ರದ್ದುಪಡಿಸಿ ನೌಕರರನ್ನು ಖಾಯಂಗೊಳಿಸಬೇಕು . ಗುತ್ತಿಗೆ ನೌಕರರಿದ್ದಲ್ಲಿ ನೇರ ನೇಮಕಾತಿ ಮಾಡಬಾರದು. ಹೊರ ಗುತ್ತಿಗೆ , ಒಳಗುತ್ತಿಗೆ ಪದ್ದತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.