ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್: ರಾಜ್ಯದಲ್ಲಿ ಮೂರು ದಿನ ತುಂತುರು ಮಳೆ
ಬೆಂಗಳೂರು, ನವೆಂಬರ್ 30 : ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್ ನಿಂದಾಗಿ ಮಹಾನಗರದ ಹವಾಮಾನದಲ್ಲೂ ಏರುಪೇರಾಗಿದೆ. ನಗರದಲ್ಲಿ ಹಲವು ದಿನಗಳಿಂದ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದೆ. ಜತೆಗೆ ಚಳಿಯೂ ಕೂಡ ಪ್ರಾರಂಭವಾಗಿದೆ.
ಮೇಲೆ ಕವಿದುಕೊಂಡು ಕುಳಿತಿದೆ ಮೋಡ, ಮಳೆ ಬರುತ್ತಾ ನೋಡಾ!
ನಗರದಲ್ಲಿ ಗುರುವಾರ ( ನ.30) ಬೆಳಗ್ಗೆ ಚಳಿ ಗಾಳಿಯ ಜತೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದ್ದು ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಜತೆಗೆ ವಾರಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಡಿಸೆಂಬರ್ 2 ರವರೆಗೆ ಕನಿಷ್ಟ19 ಹಾಗೂ ಗರಿಷ್ಠ 27 ಡಿಗ್ರಿ ತಾಪಮಾನ ವಿರಲಿದೆ. ಈ ವಾತಾವರಣ ಮುಂಜಾನೆಯ ವಾಯು ವಿಹಾರಿಗಳು, ದೈಹಿಕ ಕಸರತ್ತು ಮಾಡುವವರಿಗೆ ಹಿತಕರವೆನಿಸಿ ಮತ್ತಷ್ಟು ಪ್ರಫುಲ್ಲತೆ ತಂದುಕೊಟ್ಟಿದೆ. ಕೆಲವರಿಗೆ ಕಿರಿಕಿರಿ ಎನಿಸಿದೆ. ಬೈಕ್ ಸವಾರಿ ಮಾಡಿಕೊಂಡು ಕಚೇರಿ, ಕ್ಷೇತ್ರ ಕಾರ್ಯಕ್ಕೆ ಹೊರಟವರಿಗೆ ತುಂತುರು ಮೂಡ್ ಔಟ್ ಮಾಡಿದೆ.
ಹಲವು ಜಿಲ್ಲೆಗಳಲ್ಲಿ ಮಳೆ, ಸಿಡಿಲು ಬಡಿದು ಇಬ್ಬರು ಅಸ್ವಸ್ಥ
ಈಶಾನ್ಯ ಭಾಗದಿಂದ ತೇವಾಂಶಭರಿತ ಗಾಳಿ ಬೀಸುತ್ತಿರುವ ಪರಿಣಾಮ ರಾಜ್ಯದಲಲ್ಲಿ ಚಳಿಯ ಅನುಭವವಾಗುತ್ತಿದೆ. ಬೆಂಗಳೂರು, ಹಾಸನ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಮುಂಗಾರಿನಂತೆ ಹಿಂಗಾರು ಈ ಬಾರಿ ಭರ್ಜರಿಯಾಗಿ ಬರದಿದ್ದರೂ ಇದು ತಮಿಳುನಾಡಿನ ಸೈಕ್ಲೋನ್ ಎಫೆಕ್ಟ್ ಎನ್ನಲಾಗಿದೆ. ತಮಿಳುನಾಡಿನಲ್ಲಿ ಸೈಕ್ಲೋನ್ ನಿಂದ ಭಾರಿ ಮಳೆಯಾಗಿದೆ. ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಮಹಾನಗರದ ಹವಾಮಾನದಲ್ಲಿನ ಏರುಪೇರು ತಮಿಳುನಾಡಿನ ಸೈಕ್ಲೋನ್ ಸೂಚನೆ ನೀಡುತ್ತಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಕನ್ಯಾಕುಮಾರಿ ಬಳಿ ಇದೆ. ಅರಬ್ಬೀ ಸಮುದ್ರದ ಕಡೆ ಚಲಿಸುತ್ತಿರುವುದರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ.
ಆದರೆ ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ತೀವ್ರ ವಾಯುಭಾರ ಕುಸಿತದಿಂದಾಗಿ ಕೇರಳ ಹಾಗೂ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಿದರು. ತಂಪಾದ ಮೇಲ್ಮೈ ಗಾಳಿ ಹೆಚ್ಚಾಗಿರುವುದರಿಂದ ಹಗಲಿನಲ್ಲೂ ಚಳಿ ಹೆಚ್ಚಾಗಿ ಕಂಡುಬರಲಿದೆ.