ಆನ್ಲೈನ್ ನಲ್ಲಿ ರೆಸ್ಯೂಮ್ ಅಪ್ಲೋಡ್ ಮಾಡುವ ಮುನ್ನ ಜಾಗೃತೆ
ಬೆಂಗಳೂರು, ಡಿಸೆಂಬರ್ 02 : ಉದ್ಯೋಗಕ್ಕಾಗಿ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ವೈಯಕ್ತಿಕ ವಿವರಗಳುಳ್ಳ 'ರೆಸ್ಯುಮೆ (ಸ್ವ-ವಿವರ)' ಆನ್ ಲೈನ್ ಕಳ್ಳರು ಕದ್ದು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ದಿನಕ್ಕೆ ಎರಡರಂತೆ ಸೈಬರ್ ಅಪರಾಧ ದಾಖಲು
'ಕೋರಮಂಗಲದ ಖಾಸಗಿ ಕಂಪೆನಿಯ ಉದ್ಯೋಗಿಗೆ ಇತ್ತೀಚೆಗೆ ಕರೆ ಮಾಡಿದ್ದ ವಂಚಕ, ಬ್ಯಾಂಕ್ ಅಧಿಕಾರಿ ಎಂದು ಹೇಳಿ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆ ಮಾಹಿತಿ ಪಡೆದಿದ್ದ. ನಂತರ ಕೆಲ ನಿಮಿಷಗಳಲ್ಲೇ 20,000 ರೂಪಾಯಿ ಡ್ರಾ ಮಾಡಿಕೊಂಡಿದ್ದ. ಹಣ ಕಳೆದುಕೊಂಡಿದ್ದವರು ನೀಡಿದ್ದ ದೂರಿನನ್ವಯ ಸೈಬರ್ ವಿಭಾಗದ ಪೊಲೀಸರು ತನಿಖೆ ನಡೆಸಿದ್ದಾರೆ.
'ಡ್ರಾ ಆಗಿದ್ದ ಹಣವು ಮಡಿವಾಳದ ಯುವಕನೊಬ್ಬನ ವಾಲೆಟ್ ಆ್ಯಪ್ಗೆ ವರ್ಗಾವಣೆಯಾಗಿತ್ತು. ಆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಅಮಾಯಕ ಎಂಬುದು ತಿಳಿಯಿತು. ಉದ್ಯೋಗಕ್ಕಾಗಿ ಆತ ಜಾಲತಾಣವೊಂದರಲ್ಲಿ ರೆಸ್ಯುಮೆ ಅಪ್ಲೋಡ್ ಮಾಡಿದ್ದ. ಆ ಮಾಹಿತಿ ಕದ್ದಿದ್ದ ವಂಚಕರು ಆತನ ಹೆಸರಲ್ಲಿ ವ್ಯಾಲೆಟ್ ಕ್ರಿಯೇಟ್ ಮಾಡಿ ಅದಕ್ಕೆ ಹಣ ವರ್ಗಾಯಿಸಿದ್ದರು.
ಈ ವಂಚಕರ ಜಾಲದ ಕೃತ್ಯವನ್ನು ಬಯಲು ಮಾಡಿರುವ ಸಿಐಡಿ ಸೈಬರ್ ವಿಭಾಗದ ಪೊಲೀಸರು, ತಲೆಮರೆಸಿಕೊಂಡಿರುವ ಜಾಲದ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಉದ್ಯೋಗ ಆಕಾಂಕ್ಷಿಗಳ ರೆಸ್ಯುಮೆಗಳನ್ನು ರಕ್ಷಿಸುವಂತೆ ಜಾಲತಾಣಗಳಿಗೆ ಎಚ್ಚರಿಕೆ ಸಹ ನೀಡಿದ್ದಾರೆ.
ಯಾವುದೇ ದಾಖಲೆ ಹಾಗೂ ಮೊಬೈಲ್ ನಂಬರ್ ಇದ್ದರೆ, ಯಾರ ಬೇಕಾದರೂ ಕೆವೈಸಿ ಈ ಆ್ಯಪ್ಗಳಲ್ಲಿ ತ್ವರಿತವಾಗಿ ಖಾತೆ ತೆರೆಯಬಹುದು. ಕೆಲ ದಾಖಲೆಗಳ ವಿವರ ನಮೂದಿಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಫೋಟೊ ಸಹ ಅವಶ್ಯಕತೆ ಇರುವುದಿಲ್ಲ. ನಂತರ 15 ದಿನಗಳವರೆಗೆ ಬ್ಯಾಂಕ್ಗೆ ಹೋಗದೆ ಈ ತಾತ್ಕಾಲಿಕ ಖಾತೆ ಮೂಲಕ ಹಣ ಜಮೆ ಹಾಗೂ ವರ್ಗಾವಣೆ ಮಾಡಬಹುದು. ನಂತರ ಬ್ಯಾಂಕ್ ಶಾಖೆಗೆ ಹೋಗಿ ದಾಖಲೆಗಳನ್ನು ನೀಡಿ ಶಾಶ್ವತ ಖಾತೆಯ ಬಳಕೆಗೆ ಅವಕಾಶ ದೊರೆಯುತ್ತದೆ, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಸೈಬರ್ ವಿಭಾಗದ ಪೊಲೀಸರು ಹೇಳಿದ್ದಾರೆ.