ಬಡ್ತಿ ಮೀಸಲು: ನ್ಯಾಯಾಂಗ ನಿಂದನೆಯಿಂದ ಪಾರಾಗಲು ಸುಪ್ರೀಂ ಆದೇಶ ಪಾಲಿಸಿ
ಬೆಂಗಳೂರು, ಏಪ್ರಿಲ್ 05: ಸರ್ಕಾರಿ ಉದ್ಯೋಗದಲ್ಲಿ ಪರಿಶಿಷ್ಟರ ಬಡ್ತಿ ರಕ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾದ ಕಾರಣ, ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಗೊಳಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಬುಧವಾರ ಆದೇಶಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಆದೇಶ ಅನುಷ್ಠಾನಗೊಳಿಸಲು ಏ.25 ರಂದು ನ್ಯಾಯಪೀಠದ ಮುಂದೆ ಹಾಜರಾಗಲು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿತ್ತು. ವಿಳಂಬ ಅಥವಾ ಮುಂದೂಡಿಕೆ ಪ್ರಯತ್ನ ನ್ಯಾಯಾಂಗ ನಿಂದನೆಯ ಕ್ರಮಗಳಿಗೆ ದಾರಿ ಮಾಡಿಕೊಡಲಿದೆ ಎಂಬ ಸ್ಪಷ್ಟ ಅಭಿಪ್ರಾಯದ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಹಾಗೂ ಅಡ್ವೊಕೇಟ್ ಜನರಲ್ ಜತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ವಿರುದ್ಧ ಪತ್ರ ಬರೆದ ಐಪಿಎಸ್ ಅಧಿಕಾರಿಗೆ ನೊಟೀಸ್
ಬಿ.ಕೆ.ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರ ಬಡ್ತಿ ಮೀಸಲು ಸೌಲಭ್ಯ ರದ್ದುಪಡಿಸಿ ಸುಪ್ರೀಂಕೋರ್ಟ್ 2017ರ ಫೆಬ್ರವರಿ 9ರಂದು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಕಡ್ಡಾಯ ಕ್ರಮ ಕೈಗೊಂಡು ಏ.16ರೊಳಗೆ ತಮಗೆ ಅನುಸರಣಾ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇದರೊಂದಿಗೆ, ನಾನಾ ಇಲಾಖೆಗಳಲ್ಲಿ ಬಡ್ತಿ ಪಡೆದು ಉನ್ನತ ಹುದ್ದೆ ಅಲಂಕರಿಸಿರುವ ಸಾವಿರಾರು ಪರಿಶಿಷ್ಟ ಅಧಿಕಾರಿ ವರ್ಗದವರನ್ನು ಹಿಂಬಡ್ತಿಗೊಳಿಸುವ ಅನಿವಾರ್ಯತೆ ಸೃಷ್ಟಿಯಾಗಿರುವುದು ರಾಜ್ಯ ಸರಕಾರಕ್ಕೆ ತೀವ್ರ ಹಿನ್ನಡೆ ಹಾಗೂ ಇಕ್ಕಟ್ಟಿನ ಸಂದರ್ಭವನ್ನು ಸೃಷ್ಟಿಸಿದೆ.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ದಿನವಾದ ಏ.14 ರಂದು ಎಲ್ಲ ಇಲಾಖೆಗಳ ಪರಿಶಿಷ್ಟ ಅಧಿಕಾರಿ ವರ್ಗ ಹಾಗೂ ದಲಿತ ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟದ ತೀರ್ಮಾನ ಮಾಡಲು ನಿರ್ಧರಿಸಲಾಗಿದೆ.
ಹಿಂಬಡ್ತಿಯ ಅಪಮಾನ ಅನುಭವಿಸುವುದನ್ನು ತಪ್ಪಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಏ.14ರ ಸಭೆಯಲ್ಲಿ ಕಠಿಣ ತೀರ್ಮಾನ ಕೈಗೊಳ್ಳುವ ಎಚ್ಚರಿಕೆಯನ್ನು ಎಸ್ಸಿ, ಎಸ್ಟಿ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ.ದಾಸ್ಪ್ರಕಾಶ್ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ? ಎಲ್ಲ ಇಲಾಖೆಗಳು ಶೀಘ್ರ ಕ್ರಮ ಕೈಗೊಂಡು ಏ.16ರೊಳಗೆ ಅನುಸರಣಾ ವರದಿ ಸಲ್ಲಿಸಬೇಕು, ಕೋರ್ಟ್ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಳೆದ ವರ್ಷದ ಮೇ 6ರಂದೇ ಎಲ್ಲ ಇಲಾಖೆಗಳು ಎಲ್ಲ ವೃಂದದ ಜೇಷ್ಠತಾ ಪಟ್ಟಿ ಪರಿಷ್ಕರಿಸುವಂತೆ ಸೂಚಿಸಲಾಗಿತ್ತು.
ಮುಂಬಡ್ತಿ ಮತ್ತು ಹಿಂಬಡ್ತಿ ಎರಡನ್ನೂ ಒಳಗೊಂಡಿರಬೇಕು ಮತ್ತು ಎಲ್ಲ ಇಲಾಖೆಗಳು ವಿವಿಧ ವೃಂದಗಳಲ್ಲಿ ಹಿಂಬಡ್ತಿಗೊಳಗಾದವರ ಪಟ್ಟಿ ಪ್ರಕಟಿಸಬೇಕು. 1978ರ ಸರಕಾರಿ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕ್ರಮವಾಗಿ ನಿಗದಿಪಡಿಸಿರುವ ಶೇ.15 ಮತ್ತು ಶೇ.3 ಮುಂಬಡ್ತಿ ಮೀಸಲಾತಿ ಅಭಾದಿತ. ನಿರ್ದೇಶನ ಪಾಲನೆಯಲ್ಲಿ ವಿಫಲವಾದರೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನು ಮುಂದಿನ ಪರಿಣಾಮಗಳಿಗೆ ನೇರ ಹೊಣೆ ಎಂದು ತಿಳಿಸಲಾಗಿದೆ.