ಉತ್ತರ ಕರ್ನಾಟಕ: ಬಿಸಿಲಿನ ಝಳ, ಕೋರ್ಟ್ ವೇಳೆ ಬದಲು
ಬೆಂಗಳೂರು, ಏಪ್ರಿಲ್ 12: ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಉತ್ತರ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ವಿಪರೀತ ಉರಿ ಬಿಸಿಲು ಪ್ರಾರಂಭವಾಗಿದೆ.
ಹಾಗಾಗಿ ಉತ್ತರ ಕರ್ನಾಟಕದ 8 ಜಿಲ್ಲೆಗಳಲ್ಲಿ ಅಧೀನ ನ್ಯಾಯಾಲಯಗಳ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಏ.12ರಿಂದ ಮೇ. 31ರವರೆಗೆ ಎಲ್ಲ ಮಾದರಿಯ ಅಧೀನ ನ್ಯಾಯಾಲಯದ ಕಲಾಪದ ವೇಳೆಯನ್ನು ಬದಲು ಮಾಡಲಾಗಿದೆ.
ಈ ಕುರಿತು ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಅಶೋಕ್ ನಿಜಗಣ್ಣವರ್ ಬುಧವಾರ ಆದೇಶ ಹೊರಡಿಸಿದ್ದಾರೆ. ಕೋರ್ಟ್ಗಳು ಬೆಳಗ್ಗೆ 8ರಿಂದ ಮಧ್ಯಾಹ್ನ 11ರವರೆಗೆ ಮತ್ತು 11.30ರಿಂದ 1.30ರವರೆಗೆ ಕಾರ್ಯ ನಿರ್ವಹಿಸಲಿವೆ. ಕೋರ್ಟ್ ನ ಕಚೇರಿಗಳು ಬೆಳಗ್ಗೆ 7.30ರಿಂದ ಮಧ್ಯಾಹನ 2 ಗಂಟೆಯವರೆಗೆ ಕಾರ್ಯನಿರ್ವಹಣೆ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗುರುವಾರ ಬಳ್ಳಾರಿಯಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಯಚೂರಿನಲ್ಲಿ ಗರಿಷ್ಠ 36ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 32ಡಿಗ್ರಿ ಸೆಲ್ಸಿಯಸ್, ಯಾದಗಿರಿಯಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.