ಬೆಂಗಳೂರಿಗರ ಹೆಮ್ಮೆಯ ನಮ್ಮ ಮೆಟ್ರೋ ಉದ್ಘಾಟನೆಗೆ ಕ್ಷಣಗಣನೆ
ಬೆಂಗಳೂರು, ಜೂನ್ 17: ಬೆಂಗಳೂರಿಗರ ಹೆಮ್ಮೆಯ ನಮ್ಮ ಮೆಟ್ರೋ ಉತ್ತರ-ದಕ್ಷಿಣ ಗ್ರೀನ್ ಲೈನ್ ಕಾರಿಡಾರ್ ಇಂದು (ಜೂನ್ 17) ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಳ್ಳಲಿದೆ.
ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ 12 ಕಿ.ಮೀ.ಮಾರ್ಗವನ್ನು ಇಂದು ಸಂಜೆ 6 ಗಂಟೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟಿಸಲಿದ್ದು, ಈ ಮೂಲಕ ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣ ಮುಕ್ತಾಯಗೊಂಡು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕದ ರಾಜ್ಯಪಾಲ ವಜುಭಾಯ್ ವಾಲಾ ಅವರು ವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ, ವಾರ್ತಾ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಡಿ.ಎಚ್.ಶಂಕರಮೂರ್ತಿ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಟ್ರಾಫಿಕ್ ಮುಕ್ತ ಬೆಂಗಳೂರಿನತ್ತ ಇದೊಂದು ಯಶಸ್ವೀ ಹೆಜ್ಜೆಯಾಗಿದ್ದು, ಈ ಮಾರ್ಗವನ್ನು ಜೂನ್ 18ರ ಸಂಜೆಯಿಂದ ಸಾರ್ವಜನಿಕ ಸಂಚಾರಕ್ಕೆ ಅನುವುಮಾಡಿಕೊನಲ್ಲಿಡಲಾಗುತ್ತದೆ.
ಬೆಂಗಳೂರಿನ ಪೂರ್ವ-ಪಶ್ಚಿಮದ ಕಡೆಗೆ ತೆರಳುವವರಿಗೆ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ವರೆಗಿನ ಪರ್ಪಲ್ ಲೈನ್ ಮತ್ತು ಉತ್ತರ-ದಕ್ಷಿಣಕ್ಕೆ ತೆರಳುವವರಿಗೆ ನಾಗಸಂದ್ರದಿಂದ-ಯಲಚೇನಹಳ್ಳಿವರೆಗಿನ ಗ್ರೀನ್ ಲೈನ್ ವರದಾನವಾಗಲಿದೆ.
ಗ್ರೀನ್ ಲೈನ್ ನಿಂದ ಪರ್ಪಲ್ ಲೈನ್ ಗೆ ಅಥವಾ ಪರ್ಪಲ್ ಲೈನ್ ನಿಂದ ಗ್ರೀನ್ ಲಅಯನ್ ಗೆ ಇಂಟರ್ ಚೇಂಜ್ ಮಾಡಿಕೊಳ್ಳುವವರು ದೇಶದ ಅತ್ಯಂತ ದೊಡ್ಡ ಮೆಟ್ರೋ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಂಪೇಗೌಡ ಮೆಟ್ರೋ ಸ್ಟೇಶನ್ (ಮೆಜೆಸ್ಟಿಕ್) ಮಾರ್ಗ ಬದಲಿಸಿಕೊಳ್ಳಬಹುದು.