ವಾರದೊಳಗೆ ಸಹಕಾರ ಸಾಲಮನ್ನಾ ಆದೇಶ ಪಕ್ಕಾ: ಬಂಡೆಪ್ಪ ಕಾಶೆಂಪುರ್
ಬೆಂಗಳೂರು, ಆಗಸ್ಟ್ 6: ರಾಜ್ಯದ 22 ಲಕ್ಷ ರೈತರ ಕೃಷಿ ಸಾಲ ಮನ್ನಾ ಯೋಜನೆಯ ಗೊಂದಲಕ್ಕೆ ತೆರೆ ಎಳೆದಿರುವ ಸಚಿವ ಬಂಡೆಪ್ಪ ಕಾಶೆಂಪುರ್ ಒಂದು ವಾರದೊಳಗೆ ಸಹಕಾರ ಸಂಸ್ಥೆಗಳಲ್ಲಿನ ರೈತರ ಸಾಲ ಮನ್ನಾ ಕುರಿತಂತೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಲ ಮರುಪಾವತಿಸದ ಕೆಲವು ರೈತರಿಗೆ ಕೆಲವು ಬ್ಯಾಂಕ್ಗಳು ನೋಟಿಸ್ ಜಾರಿ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವರು 1 ಲಕ್ಷದವರೆಗಿನ ಚಾಲ್ತಿ ಸಾಲ ಮನ್ನಾ ಕುರಿತಂತೆ ಆದೇಶ ವಾರದೊಳಗೆ ಹೊರಬೀಳಲಿದೆ. ಯಾವುದೇ ಬ್ಯಾಂಕ್ಗಳು ಅಥವಾ ಸೊಸೈಟಿಗಳು ನೋಟಿಸ್ ಕೊಟ್ಟರೆ ರೈತರು ಹೆದರುವುದು ಬೇಡ.
ಸಾಲಮನ್ನಾ ಆದರೂ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್. ನಗರದ ರೈತ
ರಾಜ್ಯ ಸರ್ಕಾರ ಈ ಕುರಿತು ಉಂಟಾಗಿರುವ ಗೊಂದಲವನ್ನು ವಾರದೊಳಗೆ ಬಗೆಹರಿಸಲಿದೆ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ 22 ಲಕ್ಷ ರೈತರ ಬೆಳೆ ಸಾಲ ಮನ್ನಾ ಕುರಿತು ಭರವಸೆ ನೀಡಿದ್ದರೂ ಸರ್ಕಾರದಿಂದ ಈವರೆಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅಲ್ಲದೆ ಕೆಲವು ರಾಷ್ಟ್ರೀಕೃತ ಹಾಗೂ ಸರ್ಕಾರಿ ವಲಯದ ಬ್ಯಾಂಕ್ಗಳು ರೈತರಿಗೆ ನೋಟಿಸ್ ನೀಡುತ್ತಿದ್ದು, ಹಲವಾರು ರೈತರು ಪ್ರತಿನಿತ್ಯ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್ಗಳ ಸಾಲ ಮನ್ನಾ ಕುರಿತಂತೆ ಶೀಘ್ರ ಆದೇಶ ಹೊರಡಿಸುವ ಮುನ್ಸೂಚನೆ ನೀಡಿದೆ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಕುರಿತ ಆದೇಶ ಕೆಲಸ ದಿನಗಳ ಮಟ್ಟಿಗೆ ವಿಳಂಬವಾಗುವ ಸಾಧ್ಯತೆ ಇದೆ. ಈ ಕುರಿತು ರಾಷ್ಟ್ರೀಕೃತ ಬ್ಯಾಂಕ್ಗಳ ಉಪಸಮಿತಿಯನ್ನು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ರಚಿಸಿದೆ.