ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ
ಬೆಂಗಳೂರು, ಜನವರಿ 1: ಬೆಂಗಳೂರು ಸ್ಟೀಲ್ ಬ್ರಿಡ್ಜ್ ವಿವಾದಕ್ಕೆ ಮರುಜೀವ ದೊರೆತಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದು ಚಾಲುಕ್ಯ ವೃತ್ತದಿಂದ ಎಸ್ಟೀಮ್ ಮಾಲ್ ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭಾರೀ ವಿವಾದ ಹುಟ್ಟಿಸಿದ್ದ ಸ್ಟೀಲ್ ಬ್ರಿಡ್ಜ್ ಯೋಜನೆಗೆ ಸಮ್ಮಿಶ್ರ ಸರ್ಕಾರ ಮತ್ತೆ ಜೀವ ನೀಡಲು ಮುಂದಾಗಿದೆ. ಹೈಕಮಾಂಡ್ಗೆ ಕಪ್ಪಕಾಣಿಕೆ ಕಿಕ್ ಬ್ಯಾಕ್, ಸೇರಿ ಸರಣಿ ಆರೋಪಗಳಿಗೆ ಈ ಉಕ್ಕಿನ ಸೇತುವೆ ಗುರಿಯಾಗಿತ್ತು. ಕಳೆದ ವಿಧಾನಸಭೆಯ ಚುನಾವಣೆ ಪ್ರಚಾರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸ್ಟೀಲ್ ಬ್ರಿಡ್ಜ್ ಕಿಕ್ ಬ್ಯಾಕ್ ಪ್ರಕರಣವನ್ನು ಉಲ್ಲೇಖಿಸಿದ್ದರು.
ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಖಚಿತ!
ವಿವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಹಿಂದಿನ ಸರ್ಕಾರ ಕೈಬಿಟ್ಟಿತ್ತು. ಆದರೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಪರಮೇಶ್ವರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ಟೀಲ್ ಬ್ರಿಡ್ಜ್ ಅನಿವಾರ್ಯವಾಗಿದೆ. ಹೀಗಾಗಿ ಸಾರ್ವಜನಿಕರ ಸಲಹೆ ಸೂಚನೆ ಪಡೆದು ಯೋಜನೆಗೆ ಅಂತಿಮ ರೂಪ ನೀಡಲಾಗುವುದು ಈಗಾಗಲೇ ಡಿಪಿಆರ್ ಸಿದ್ಧಗೊಂಡಿದ್ದು, ಸಾರ್ವಜನಿಕರ ಎದುರು ಇಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಯೋಜನೆಗೆ ತಡೆ ಇಲ್ಲ
ಒಟ್ಟು 6.7 ಕಿ.ಮೀ ಉದ್ದದ ಈ ಯೋಜನೆಗೆ 1800 ಕೋಟಿ ರೂ ಮೀಸಲಿಡಲಾಗಿತ್ತು, ಈ ಯೋಜನೆಯಿಂದ 817 ಮರಗಳು ಆಹುತಿಯಾಗುತ್ತಿದ್ದವು, ಹೀಗಾಗಿ ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಸ್ಟೀಲ್ ಬ್ರಿಡ್ಜ್ ಮೇಲೆ ಪ್ರಯಾಣಿಸುವವರು ಟೋಲ್ ನೀಡಬೇಕು ಎನ್ನುವ ಮಾತುಗಳೂ ಕೇಳಿಬಂದಿತ್ತು.