ರಾಜ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಹೆಚ್ಚು : ಆರ್.ವಿ.ದೇವರಾಜ್
ಬೆಂಗಳೂರು, ಮಾರ್ಚ್ 08 : 'ರಾಜ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹಳ ಹೆಚ್ಚು. ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಯಾವುದೇ ಕ್ಷೇತ್ರವಿರಲಿ ಅಲ್ಲಿ ಮಹಿಳೆ ಪಾತ್ರ ಬಹಳಷ್ಟು ಹಿರಿದು' ಎಂದು ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹಾಗೂ ಚಿಕ್ಕಪೇಟೆ ಶಾಸಕ ಆರ್.ವಿ. ದೇವರಾಜ್ ಹೇಳಿದರು.
ಗುರುವಾರ ಬೆಂಗಳೂರಿನ ಬಸವನಗುಡಿಯಲ್ಲಿ ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕಪೇಟೆ ಬಿಜೆಪಿ ಟಿಕೆಟ್ಗೆ 5ಕ್ಕೂ ಹೆಚ್ಚು ಆಕಾಂಕ್ಷಿಗಳು!
'ಮಹಿಳೆಯ ಕೊಡಗೆಯಿಲ್ಲದೆ ಯಾವುದೇ ಕೆಲಸಗಳು ಅಸಾಧ್ಯ. ನಮ್ಮ ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನದ ವತಿಯಿಂದ ಮಹಿಳೆಯರ ಅಭಿವೃದ್ದಿಗೆ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಟ್ರಸ್ಟ್ ಅಧ್ಯಕ್ಷತೆಯನ್ನು ವಹಿಸಿರುವ ನನ್ನ ಪತ್ನಿ ಮಮತಾ ದೇವರಾಜ್ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ' ಎಂದರು.
'ಈ ದಿನ ನಡೆಯುತ್ತಿರುವ ಈ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳುವ ಮೂಲಕ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಹತೆಯ ಜೊತೆಗೆ ಕೌಶಲ್ಯವೂ ಅಗತ್ಯವಾಗಿದ್ದು, ಇದರ ಮೂಲಕ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದಾಗಿದೆ' ಎಂದು ತಿಳಿಸಿದರು.
ಸಾಧನೆಯ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಮೂಡಿಸಿದ ಮೊದಲಿಗರಿವರು
ಮಮತಾ ದೇವರಾಜ್ ಮಾತನಾಡಿ, 'ನಮ್ಮ ಕ್ಷೇತ್ರದ ಮಹಿಳೆಯರು ಉದ್ಯೋಗದ ಕೌಶಲ್ಯಗಳನ್ನು ಪಡೆದುಕೊಳ್ಳುವ ಮೂಲಕ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳಲಿ ಎಂದು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಾಳೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದು ಬೆಂಗಳೂರು ನಗರದ ಯುವಕ-ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು' ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ದೇವಸಿಂಗ್ ಗಿಲ್, ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್, ಕಾಂಗ್ರೆಸ್ ಮುಖಂಡರಾದ ಎಂ. ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಾ.9ರಂದು ಉದ್ಯೋಗ ಮೇಳ : ಮಾರ್ಚ್ 9ರ ಶುಕ್ರವಾರ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಯುವಕ-ಯುವತಿಯರು ಈ ಮೇಳದಲ್ಲಿ ಪಾಲ್ಗೊಂಡು ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.