ಚಿಕ್ಕಬಳ್ಳಾಪುರದಿಂದ ಮೊಯ್ಲಿ ಕಣಕ್ಕಿಳಿದರೆ, ಜೆಡಿಎಸ್ ಅಪಸ್ವರ ಸಾಧ್ಯತೆ
ಚಿಕ್ಕಬಳ್ಳಾಪುರ, ಆಗಸ್ಟ್ 23: ಲೋಕಸಭೆ ಚುನಾವಣೆ 2019 ಹತ್ತಿರವಾಗಿತ್ತಿದ್ದು, ರಾಜ್ಯದಲ್ಲಿ ಟಿಕೆಟ್ ಗೊಂದಲ ನಿಧಾನಕ್ಕೆ ಮುನ್ನೆಲೆಗೆ ಬರುತ್ತಿದೆ.
ಕಾಂಗ್ರೆಸ್ ಸಂಸದ ವೀರಪ್ಪ ಮೊಯ್ಲಿ ಅವರು 'ಲೋಕಸಭೆ ಚುನಾವಣೆಗೆ ಈ ಬಾರಿಯೂ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತೇನೆ' ಎಂದಿದ್ದರು. ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಿದ್ದು. ಜೆಡಿಎಸ್-ಕಾಂಗ್ರೆಸ್ ಸಮಬಲದಲ್ಲಿರುವ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬ ಕುತೂಹಲ ಮನೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಇಲ್ಲಿ ಬಲಿಷ್ಠವಾಗಿರುವ ಕಾರಣ ಯಾರಿಗೇ ಟಿಕೆಟ್ ಕೊಟ್ಟರೂ ಚುನಾವಣಾ ಕಣ ರಂಗೇರಲಿದೆ.
ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಸೋತಿದ್ದರು
ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಪ್ರಸ್ತುತ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣೆಗೆ ನಿಂತು ಸೋಲನ್ನು ಅನುಭವಿಸಿದ್ದರು. ಬಿಜೆಪಿಯಿಂದ ಹೊಸಕೋಟೆ ಮಾಜಿ ಶಾಸಕ ಬಚ್ಚೇಗೌಡ ಅವರು ಕಣಕ್ಕಿಳಿದು ಸೋತಿದ್ದರು.
ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಬಹುಮತವಿಲ್ಲ!
ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಲು ಜೆಡಿಎಸ್ ಒತ್ತಾಯ
ಎತ್ತಿನ ಹೊಳೆ ಯೋಜನೆಯನ್ನು ತರಾತುರಿಯಲ್ಲಿ ಉದ್ಘಾಟಿಸಿ ಈ ಭಾಗದ ಜನರಿಗೆ ನೀರಿನ ಆಸೆ ತೋರಿಸಿ ಮೊಯ್ಲಿ ಗೆದ್ದಿದ್ದಾರೆ ಆದರೆ ಗೆದ್ದ ನಂತರ ಕ್ಷೇತ್ರದ ಜನರೊಂದಿಗೆ ಅವರು ಸಂಪರ್ಕ ಕಡಿದುಕೊಂಡಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಹಾಗಾಗಿ ಈ ಬಾರಿ ನಮ್ಮ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬುದು ಸ್ಥಳೀಯ ಜೆಡಿಎಸ್ ಮುಖಂಡರ ವಾದ.
ಚಿಕ್ಕಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ?
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅಥವಾ ಜೆಡಿಎಸ್ನ ಯಾವುದಾದರೂ ಪರಿಚಿತ ಮುಖವನ್ನೇ ಕಣಕ್ಕಿಳಿಸಲಾಗುತ್ತದೆ ಎಂಬ ಗಾಳಿ ಸುದ್ದಿ ಈಗಾಗಲೇ ಕ್ಷೇತ್ರದಲ್ಲಿ ಹಬ್ಬಿದೆ. ಕುಮಾರಸ್ವಾಮಿ ಅವರ ಆಪ್ತ, ಸಿನಿಮಾ ನಿರ್ಮಾಪಕ, ಒಕ್ಕಲಿಗ ಸಮುದಾಯದ ಸಿ.ಆರ್.ಮನೋಹರ್ ಅವರು ಅಭ್ಯರ್ಥಿ ಆಗಿದ್ದಾರೆ. ಅವರು ವಿಧಾನಸಭೆ ಚುನಾವಣೆಗೆ ಬಾಗೆಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ.
ಬಿಜೆಪಿಯ ಪ್ರಬಲ ಅಭ್ಯರ್ಥಿ ಬಚ್ಚೇಗೌಡ
ಬಿಜೆಪಿಯ ಬಚ್ಚೇಗೌಡ ಅವರು ಪ್ರಬಲ ಅಭ್ಯರ್ಥಿಯಾಗಿದ್ದು, ಕಳೆದ ಬಾರಿ ಕುಮಾರಸ್ವಾಮಿ ಅವರು ಸ್ಪರ್ಧಿಸಿದ ಕಾರಣ ಒಕ್ಕಲಿಗ ಮತಗಳು ವಿಂಗಡನೆ ಆಗಿ ಸೋಲನ್ನನುಭವಿಸಿದ್ದರು. ವೀರಪ್ಪ ಮೊಯ್ಲಿ ಅವರು 9500 ಅಲ್ಪ ಮತಗಳ ಅಂತರದಿಂದ ಗೆದ್ದಿದ್ದರು. ಎಚ್.ಡಿ.ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ತಪ್ತಿ ಪಟ್ಟುಕೊಂಡಿದ್ದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದರೆ ಬಚ್ಚೇಗೌಡಗೆ ಹಿನ್ನಡೆ
ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆದಲ್ಲಿ ಮತ್ತೆ ಬಚ್ಚೇಗೌಡ ಅವರಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಆದರೆ ವೀರಪ್ಪ ಮೊಯ್ಲಿ ಅವರಿಗೆ ಕ್ಷೇತ್ರದಿಂದ ಟಿಕೆಟ್ ನೀಡಿದಲ್ಲಿ ಬಹುಸಂಖ್ಯಾತ ಒಕ್ಕಲಿಗ ಮತಗಳು ಬಚ್ಚೇಗೌಡ ಪರ ವಾಲುವ ಸಾಧ್ಯತೆ ಇದೆ ಎಂಬುದು ಜೆಡಿಎಸ್ ವಾದ.