ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರ, ವಿಚಾರಣೆಯ ವೇಳೆ ಬಯಲು!
ರಾಮಚಂದ್ರಾಪುರ ಮಠಕ್ಕೆ ಸೇರಿದ ಜಾಗದ ವಿಚಾರದಲ್ಲಿ ಕಿರುಕುಳ ನೀಡಿ, ಮಠದ ಪ್ರತಿಷ್ಠೆಗೆ ಧಕ್ಕೆ ತರುವ ಹಿಂದಿನ ಷಡ್ಯಂತ್ರ ಮತ್ತು ಅದರ ಹಿಂದಿನ ಸೂತ್ರದಾರ ಯಾರು ಎನ್ನುವ ವಿಚಾರ ನ್ಯಾಯಾಲಯದ ವಿಚಾರಣೆಯ ವೇಳೆ ಬಹಿರಂಗವಾಗಿದೆ.
ಬೆಂಗಳೂರು, ಜುಲೈ 14: ಗಿರಿನಗರದ ರಾಮಚಂದ್ರಾಪುರ ಮಠಕ್ಕೆ ಸೇರಿದ ಜಾಗದ ವಿಚಾರದಲ್ಲಿ ಕಿರುಕುಳ ನೀಡಿ, ಮಠದ ಪ್ರತಿಷ್ಠೆಗೆ ಧಕ್ಕೆ ತರುವ ಹಿಂದಿನ ಷಡ್ಯಂತ್ರ ಮತ್ತು ಅದರ ಹಿಂದಿನ ಸೂತ್ರದಾರ ಯಾರು ಎನ್ನುವ ವಿಚಾರ ನ್ಯಾಯಾಲಯದ ವಿಚಾರಣೆಯ ವೇಳೆ ಬಹಿರಂಗವಾಗಿದೆ.
ಗಿರಿನಗರ ಮಠದ ಜಾಗದಲ್ಲಿ ಕಟ್ಟಡ ನಿರ್ಮಿಸಲು, ಬಿಬಿಎಂಪಿ ಮಠಕ್ಕೆ ಅನುಮತಿಯನ್ನು ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ವಾರ ರಾಜ್ಯ ಉಚ್ಚ ನ್ಯಾಯಾಲಯ ಬಿಬಿಎಂಪಿ ಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಜೊತೆಗೆ, ಈ ಸಂಬಂಧಿತ 4 ಜನ ಅಧಿಕಾರಿಗಳಿಗೆ 50,000 ಸಾವಿರ ದಂಡ ಸ್ವರೂಪದ ಠೇವಣಿ ಹಾಗೂ ಮುಂದಿನ ವಿಚಾರಣೆಯ (ಜುಲೈ 14) ಸಂದರ್ಭದಲ್ಲಿ ನ್ಯಾಯಪೀಠದ ಮುಂದೆ ವೈಯಕ್ತಿಕವಾಗಿ ಹಾಜರಿರುವಂತೆ ಆದೇಶಿಸಿತ್ತು.
ಮಾಡಿದ ತಪ್ಪನ್ನು ತಿದ್ದಿಕೊಂಡು ಆದೇಶ ಹಿಂಪಡೆದ ಬಿಬಿಎಂಪಿ
ಈ ಕುರಿತು ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠದ ಮುಂದೆ ಹಾಜರಾದ ಬಿಡಿಎ ಇಂಜಿನಿಯರ್ ಅವರು ಹಿಂದಿನ ಬಿಡಿಎ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳ ಸೂಚನೆಯಂತೆ, ತಾವು ಈ ಕ್ರಮ ಕೈಗೊಂಡಿದ್ದೆವು ಎಂದು ಕೋರ್ಟಿನಲ್ಲಿ ಹೇಳಿಕೆ ನೀಡಿದರು ಎಂದು ಮಠದ ಅಧಿಕಾರಿಗಳು 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ಮೇಲಧಿಕಾರಿಯಾಗಿದ್ದ ಹಿಂದಿನ ಬಿಡಿಎ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳ ಸೂಚನೆಯಂತೆ ನಕ್ಷೆಯನ್ನು ಹಿಂಪಡೆದಿದ್ದಾಗಿ ಹೇಳಿದ ಬಿಡಿಎ ಇಂಜಿನಿಯರ್ (ಇತ್ತೀಚಿಗೆ ನಿವೃತ್ತ) ಅವರಿಗೆ, ಈ ಕುರಿತಾಗಿ ಅಫಿಡವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.
ಕಳೆದ 2-3 ವರ್ಷಗಳಿಂದ ರಾಮಚಂದ್ರಾಪುರ ಮಠದ ವಿರುದ್ಧ ವಿವಿಧ ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಿದೆ ಎಂದು ಮಠದ ಭಕ್ತರು ಹೇಳುತ್ತಾ ಬಂದಿದ್ದರು. ಇದೀಗ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಆಯಕಟ್ಟಿನ ಜಾಗದಲ್ಲಿರುವ ವ್ಯಕ್ತಿಗಳು ವ್ಯವಸ್ಥಿತವಾಗಿ ಮಠದ ವಿರುದ್ಧ ಷಡ್ಯಂತ್ರದಲ್ಲಿ ತೊಡಗಿಕೊಂಡಿದ್ದರು ಎಂಬುದು ಇದರಿಂದ ಸಾಬೀತಾದಂತಾಗಿದೆ ಎಂದು ಮಠದ ಅಧಿಕಾರಿಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.
ಹಿನ್ನೆಲೆ: ಪ್ರಸ್ತುತ ಜಾಗವು 1978ನೇ ಇಸವಿಯಲ್ಲಿ ರಾಮಚಂದ್ರಾಪುರ ಮಠಕ್ಕೆ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಮಠದ ಹೆಸರಿನಲ್ಲಿ ಖಾತಾ ಆಗಿ, ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ. ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಎರಡು ಮಹಡಿಯ ಕಟ್ಟಡವು ಇತ್ತು.
ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಮುಂದಾಗಿತ್ತು. ಆದರೆ 2015 ರಲ್ಲಿ ಬಿಡಿಎ ಯಿಂದ ಬಂದ ಪತ್ರದ ಆಧಾರದ ಮೇಲೆ, ಪರವಾನಗಿ ಅನುಮತಿಯನ್ನು ಹಿಂಪಡೆದು ಬಿಬಿಎಂಪಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಮಠ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು.
ವಿಚಾರಣಾ ಸಂದರ್ಭದಲ್ಲಿ ಬಿಬಿಎಂಪಿಯ ಕ್ರಮದ ಕುರಿತು ಕಟುವಾಗಿ ಟೀಕಿಸಿದ್ದ ಉಚ್ಚ ನ್ಯಾಯಾಲಯ, ಸಂಬಂಧಿತ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ ತಲಾ 50,000 ರೂ ದಂಡ ಸ್ವರೂಪವಾಗಿ ಉಚ್ಚ ನ್ಯಾಯಾಲಯದಲ್ಲಿ ಠೇವಣಿ ಮಾಡಲು, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರಲು ಹಾಗೂ ಬಿಬಿಎಂಪಿಯ ಪರವಾನಗಿ ರದ್ಧತಿ ಆದೇಶಕ್ಕೆ ತಡೆಯಾಜ್ಜೆಯನ್ನು ನೀಡಿ ಆದೇಶಿಸಿತ್ತು.