ಅಂಬರೀಷ್ ವಿರುದ್ಧ ರಾಹುಲ್ಗೆ ಮಂಡ್ಯ ಕಾಂಗ್ರೆಸ್ಸಿಗರ ಪತ್ರ
ಬೆಂಗಳೂರು, ಡಿ. 11: ವಸತಿ ಸಚಿವ ಅಂಬರೀಷ್ ವಿರುದ್ಧ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರ ಕೋಪ ಮತ್ತೆ ಭುಗಿಲೆದ್ದಿದೆ. ತಮ್ಮನ್ನು ನಿಷ್ಠ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಹಿಂದ ಯುವ ವೇದಿಕೆ ಸದಸ್ಯರು ಎಂದು ಹೇಳಿಕೊಂಡು ಅಂಬರೀಷ್ ವಿರುದ್ಧ ಪಕ್ಷದ ಯುವರಾಜ ರಾಹುಲ್ ಗಾಂಧಿಗೆ ಪತ್ರ ಬರೆದು ದೂರು ನೀಡಿದ್ದಾರೆ.
ಪತ್ರದ ಜೊತೆಯಲ್ಲಿ ಅಂಬರೀಷ್ ಅವರು ಮದ್ಯ ಸೇವಿಸಿ ಬಾರ್ನಲ್ಲಿ ನರ್ತಿಸುತ್ತಿರುವುದು ಹಾಗೂ ಅಪರಿಚಿತ ಮಹಿಳೆಯರಿಗೆ ಚುಂಬಿಸುತ್ತಿರುವ ವಿಡಿಯೋ ಕಳುಹಿಸಿದ್ದಾರೆ.
ಅಂಬರೀಷ್ ಅವರು ತಮ್ಮ ಸಚಿವ ಹಾಗೂ ಶಾಸಕ ಸ್ಥಾನದ ಜವಾಬ್ದಾರಿ ನಿಭಾಯಿಸುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪತ್ರದಲ್ಲಿ ಒಟ್ಟು 83 ಜನರ ಸಹಿ ಇದೆ. [ಬೆಳಗಾವಿಯಲ್ಲಿ ಹೇಳಿದ್ದು, ಕೇಳಿದ್ದು]
ಪಕ್ಷದಲ್ಲಿ ಏನೇನು ಬರೆದಿದೆ?:
- ಅಂಬರೀಷ್ ಅವರು ಬಾರ್ನಲ್ಲಿ ಕುಳಿತು ಮದ್ಯ ಸೇವಿಸುತ್ತ ಬೆಂಬಲಿಗರೊಂದಿಗೆ ನರ್ತಿಸಿದ್ದಾರೆ. ಅಪರಿಚಿತ ಮಹಿಳೆಯರಿಗೆ ಚುಂಬಿಸಿದ್ದಾರೆ
- ಕಲಬುರ್ಗಿಯಲ್ಲಿ ನಡೆದ ಸಂಪುಟ ಸಚಿವರ ಸಭೆಗೆ ಗೈರಾಗಿ ಬೆಂಗಳೂರಿನಲ್ಲಿ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು
- ಕೆಪಿಸಿಸಿ ಅಥವಾ ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಬರುವುದಿಲ್ಲ
- ಕುದುರೆ ರೇಸ್ನಲ್ಲಿ ಪಾಲ್ಗೊಂಡಿದ್ದ ಅಂಬರೀಷ್ರನ್ನು ಹಿಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬಹಿರಂಗವಾಗಿ ಟೀಕಿಸಿದ್ದರು
- ಸಿಂಗಪುರದಲ್ಲಿ ಚಿಕಿತ್ಸೆ ಪಡೆದ ನಂತರವೂ ದುಶ್ಚಟ ಮುಂದುವರಿಸಿದ್ದಾರೆ
- ಶಾಸಕರಾಗಿ, ಸಚಿವರಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ
- ನಿಗಮ-ಮಂಡಳಿಗೆ ನೇಮಕ ಸಂದರ್ಭ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಬಹಿರಂಗವಾಗಿ ಆರೋಪಿಸಿದ್ದರು
- ಅಂಬರೀಷ್ ಅವರ ಚಟುವಟಿಕೆಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿವೆ. ವರ್ತನೆ ತಿದ್ದಿಕೊಳ್ಳುವಂತೆ ಅವರಿಗೆ ಸೂಚನೆ ನೀಡಬೇಕು.
ಅಂಬರೀಷ್ ಪ್ರತಿಕ್ರಿಯೆ: ತಮ್ಮ ಮೇಲಿನ ದೂರಿಗೆ ಸಚಿವ ಅಂಬರೀಷ್ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. [ಮಂಡ್ಯದಲ್ಲಿ ಅಂಬರೀಷ್ ರಹಸ್ಯ ಸಭೆ]
"ನಾನು ಖಾಸಗಿ ಜೀವನದಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದ್ದೇನೆ, ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದೇನೆ. ನನ್ನಿಂದ ಯಾರಿಗೂ ತೊಂದರೆಯಾಗಿಲ್ಲ. 3 ಅಲ್ಲ 350 ಜತೆ ಹುಡುಗಿಯರ ಜತೆ ಓಡಾಡಿದ್ದೇನೆ".