2019ರ ಫೆಬ್ರವರಿ ಅಥವಾ ಮಾರ್ಚ್ ಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ನವೆಂಬರ್ 10 : ಮುಂಬರುವ ಲೋಕಸಭಾ ಚುನಾವಣೆಗೆ 2019ರ ಫೆಬ್ರವರಿ ಅಥವಾ ಮಾರ್ಚ್ ಹೊತ್ತಿಗೆ ಕಾಂಗ್ರೆಸ್ ನ ಪ್ರಣಾಳಿಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ, ಪ್ರೊ ರಾಜೀವ್ ಗೌಡ ಹೇಳಿದ್ದಾರೆ.
"ಎಐಸಿಸಿ ಸಂಶೋಧನಾ ವಿಭಾಗವು ಪ್ರತಿ ರಾಜ್ಯದಿಂದ ಸಲಹೆಗಳನ್ನು ಸಂಗ್ರಹ ಮಾಡುತ್ತಿದೆ. ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಜನವರಿ ತನಕ ಪ್ರಣಾಳಿಕೆ ಸಮಿತಿಯು ಚರ್ಚಾ ಸಭೆಗಳನ್ನು ಆಯೋಜಿಸಲಿದೆ. ಫೆಬ್ರವರಿ-ಮಾರ್ಚ್ ಹೊತ್ತಿಗೆ ಪ್ರಣಾಳಿಕೆ ಸಿದ್ಧವಾಗಲಿದೆ. ಏಪ್ರಿಲ್-ಮೇ ಹೊತ್ತಿಗೆ ಚುನಾವಣೆ ನಡೆಯಬಹುದು" ಎಂದು ರಾಜೀವ್ ಗೌಡ ಹೇಳಿದ್ದಾರೆ.
ಅಪನಗದೀಕರಣ ವ್ಯವಸ್ಥಿತ ಹಣಕಾಸು ಅಪರಾಧ ಹಗರಣ: ರಾಹುಲ್ ಗಾಂಧಿ
"ಎಲ್ಲ ಕಡೆಯಿಂದ ಬರುವ ಸಲಹೆಗಳಿಗೆ ಗೌರವ ನೀಡುತ್ತೇವೆ. ವಿದ್ಯಾರ್ಥಿಗಳು ಸೇರಿದಂತೆ ವಿವಿಧ ವರ್ಗದವರು ಪ್ರಣಾಳಿಕೆ ರೂಪಿಸುವುದರಲ್ಲಿ ಪಾಲ್ಗೊಳ್ಳುತ್ತಾರೆ. ಮಹಾಘಟ್ ಬಂಧನ್ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. ನಮ್ಮ ಸಾಮಾನ್ಯ ಕನಿಷ್ಠ ಕಾರ್ಯಕ್ರಾಕ್ಕೆ ಮಿತ್ರ ಪಕ್ಷಗಳು ಒಪ್ಪಿಗೆ ಸೂಚಿಸುತ್ತವೆ ಎಂದುಕೊಂಡಿದ್ದೇವೆ" ಎಂಬುದಾಗಿ ಎಐಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ರಾಜೀವ್ ಗೌಡ ಹೇಳಿದ್ದಾರೆ.
ನಿವೃತ್ತ ಯೋಧರು, ಶಿಕ್ಷಣ ಇಲಾಖೆ, ಪರಿಸರ ಕ್ಷೇತ್ರದವರು, ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗದವರು, ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಇರುವವರ ಜತೆಗೆ ಪ್ರಣಾಳಿಕೆ ಸಮಿತಿ ಚರ್ಚೆ ನಡೆಸಿದೆ. ಅಲಿಗಢ, ಬೆಂಗಳೂರು, ಚಂಡೀಗಢ, ಮಂಗಳೂರು, ಗುವಾಹತಿ, ಪುಣೆ, ನಾಗ್ಪುರ, ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ವಿಶಾಖಪಟ್ಟಣ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಸಭೆ ಆಯೋಜಿಸಿದೆ.
ಇದರ ಜತೆಗೆ ಸಾರ್ವಜನಿಕರು [email protected] ಗೆ ಮೇಲ್ ಕಳುಹಿಸಬಹುದು. ಅಥವಾ ವೆಬ್ ಸೈಟ್ ಮೂಲಕವೂ ಸಲಹೆ-ಸೂಚನೆಗಳನ್ನು ಕಳುಹಿಸಬಹುದು.