ದೋಸ್ತಿಗೂ ಮುಂಚೆ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿ ಅಂದರೇಕೆ ಗೌಡರು?
Recommended Video
ಬೆಂಗಳೂರು, ಜನವರಿ 4: ಪ್ರಾದೇಶಿಕ ಪಕ್ಷಗಳನ್ನು ಮೈತ್ರಿ ಪಕ್ಷವಾದ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ-ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಅವರು ಈಗ ಮಾತನಾಡಿರುವುದು ಕರ್ನಾಟಕದಲ್ಲಿ ಚಲಾವಣೆಯಲ್ಲಿರುವ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದ ಬಗ್ಗೆ ಅಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಲೆಕ್ಕಾಚಾರದ ಬಗ್ಗೆ.
ಎಲ್ಲ ಜಾತ್ಯತೀತ ಪಕ್ಷಗಳ ಪಾಲಿಗೆ ಕಾಂಗ್ರೆಸ್ ದೊಡ್ಡಣ್ಣ ಇದ್ದ ಹಾಗೆ. ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮೈತ್ರಿಗೆ ಮುಂದಾಗುವ ಮುಂಚೆ ಅವರು (ಕಾಂಗ್ರೆಸ್) ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಾ ಇದೆ ಎಂದು ಗುರುವಾರ ರಾತ್ರಿ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ತಂತ್ರವೇನಿರಬಹುದು?
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದೇ ಸಂದರ್ಭದಲ್ಲಿ ಸಲಹೆ ನೀಡಿದ ದೇವೇಗೌಡರು, ಈ ಮೈತ್ರಿ ಸರಕಾರದಲ್ಲಿ ಯಾರನ್ನೂ ನಾನು ದೂಷಿಸುವುದಿಲ್ಲ. ನನಗೆ ಗೊತ್ತಿದೆ ಅವರೆಷ್ಟು ನೋವನ್ನು ಅನುಭವಿಸುತ್ತಿದ್ದಾರೆ ಎಂಬ ಸಂಗತಿ. ತಮ್ಮ ಗುರಿ ತಲುಪುವ ಸಲುವಾಗಿ ಇವನ್ನೆಲ್ಲ ಸಹಿಸಲೇಬೇಕು. ಇವನ್ನೆಲ್ಲ ಮರೆತು ಪಕ್ಷ ಕೂಡ ಮುಂದಕ್ಕೆ ಹೆಜ್ಜೆಯಿಡಬೇಕು ಎಂದಿದ್ದಾರೆ.
ಎರಡು-ಒಂದರ ಅನುಪಾತದಲ್ಲಿ ಸ್ಥಾನ ಹಂಚಿಕೆ
ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿರುವ ಇಪ್ಪತ್ತೆಂಟು ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಎರಡು-ಒಂದರ ಅನುಪಾತದಲ್ಲಿ ಸ್ಥಾನ ಹಂಚಿಕೆ ಅಗಲಿದೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯ ದೊರೆತಿದೆ.
ಕಾಂಗ್ರೆಸ್ ನಿಂದ ಏಕಪಕ್ಷೀಯ ನಿರ್ಧಾರ: ಅಸಮಾಧಾನ
ನಿಗಮ ಹಾಗೂ ಮಂಡಳಿಗಳ ನೇಮಕಾತಿಯಲ್ಲಿ ಕಾಂಗ್ರೆಸ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ ಎಂಬ ಅಸಮಾಧಾನ ಜೆಡಿಎಸ್ ನಲ್ಲಿದೆ. ಇನ್ನು ಇದೇ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ, ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಮೈತ್ರಿ ಸರಕಾರದಲ್ಲಿ ಇರುವ ಏಕೈಕ ಕಾರಣಕ್ಕೆ ಜೆಡಿಎಸ್ ನಾಯಕರನ್ನು ಹೇಗೆಂದರೆ ಹಾಗೆ ನಡೆಸಿಕೊಳ್ಳಬಾರದು ಎಂದಿದ್ದಾರೆ.
ಜೆಡಿಎಸ್ ಮಾಡಿದ ಸಾಲ ಮನ್ನಾ ದೇಶಕ್ಕೇ ಮಾದರಿ
ಕುಮಾರಸ್ವಾಮಿ ಅವರು ಮಾತನಾಡಿ, ಮೈತ್ರಿ ಪಕ್ಷಗಳು ಎರಡು-ಒಂದರ ಅನುಪಾತವನ್ನೇ ಅನುಸರಿಸುತ್ತಿವೆ. ಇದೇ ಸೂತ್ರವನ್ನೇ ಲೋಕಸಭಾ ಚುನಾವಣೆಗೂ ಅನ್ವಯಿಸಲಿದೆ ಎಂಬ ಭರವಸೆ ಇದೆ. ಇನ್ನು ಕರ್ನಾಟಕದಲ್ಲಿ ಮಾಡಿದ ಸಾಲ ಮನ್ನಾ ಮಾದರಿಯನ್ನು ಇಡೀ ದೇಶದಲ್ಲಿ ಅನುಸರಿಸಬಹುದು ಎಂದಿದ್ದಾರೆ. ಸಾಲ ಮನ್ನಾದ ಪೂರ್ತಿ ಶ್ರೇಯವನ್ನು ಜೆಡಿಎಸ್ ಪಾಲಿಗೆ ಎಂಬಂತಾಗಿದೆ.
ಸೋತ ಮುಖಂಡರಿಗೆ ನಿಗಮ-ಮಂಡಳಿಯಲ್ಲಿ ಸ್ಥಾನ
ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದಿರುವ ಕುಮಾರಸ್ವಾಮಿ, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಪಕ್ಷದ ಮುಖಂಡರ ಸಲುವಾಗಿ ಶಾಸಕರು ತ್ಯಾಗ ಮಾಡಬೇಕಾಗುತ್ತದೆ ಎನ್ನುವ ಮೂಲಕ ಸೋಲು ಕಂಡವರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳು ದೊರೆಯುವ ಸೂಚನೆ ನೀಡಿದ್ದಾರೆ.