ಏಟು ತಿಂದು ಮಲಗಿರುವ ಶಾಸಕ ಆನಂದ್ ಸಿಂಗ್ ನೀಡಿದ್ದಾರೆ ಶಾಕಿಂಗ್ ಹೇಳಿಕೆ
ಬೆಂಗಳೂರು, ಜನವರಿ 21: ಈಗಲ್ ಟನ್ ರೆಸಾರ್ಟ್ನಲ್ಲಿ ಮೊನ್ನೆ ರಾತ್ರಿ ನಡೆದ ಮಾರಾಮಾರಿಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಂದ ಹೊಡೆತ ತಿಂದು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಅವರು ಬಿಡದಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಶಾಸಕ ಗಣೇಶ್ ನನ್ನ ಕೊಲೆಗೆ ಯತ್ನಿಸಿದ ಎಂದು ಆನಂದ್ ಸಿಂಗ್ ಹೇಳಿದ್ದು, ಸಂತ್ರಸ್ತನ ಈ ಹೇಳಿಕೆ ಗಣೇಶ್ ಅವರಿಗೆ ಬಂಧನ ಭೀತಿಯನ್ನು ಎದುರಾಗಿಸಿದೆ. ಆನಂದ್ ಸಿಂಗ್ ಅವರು ಪೊಲೀಸರಿಗೆ ನೀಡಿರುವ ಹೇಳಿಕೆಯ ಪೂರ್ಣ ವರದಿ ಇಲ್ಲಿದೆ.
ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್ನಿಂದ ಅಮಾನತು
'ಪಕ್ಷದ ಸೂಚನೆಯಂತೆ ಈಗಲ್ಟನ್ ರೆಸಾರ್ಟ್ನಲ್ಲಿ ಇದ್ದ ನಾನು ಶನಿವಾರ ರಾತ್ರಿ ಊಟ ಮುಗಿಸಿ ಸಚಿವ ತುಕಾರಾಂ, ಶಾಸಕ ರಘುಮೂರ್ತಿ, ತನ್ವೀರ್ ಸೇಠ್ ಅವರುಗಳ ಜೊತೆ ನನ್ನ ರೂಮ್ (ನಂ 207) ಕಡೆ ಹೋಗುತ್ತಿದ್ದೆ. ಆಗ ಬಹು ಕೆಟ್ಟ ಭಾಷೆಯಲ್ಲಿ ನನ್ನ ಕೂಗಿ ಕರೆದು ನಿಲ್ಲುವಂತೆ ಕಂಪ್ಲಿ ಶಾಸಕ ಗಣೇಶ್ ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. (ಯಾವ ಪದಗಳನ್ನು ಬಳಸಿದರೆಂದು ಪೊಲೀಸ್ ಹೇಳಿಕೆಯಲ್ಲಿ ನಮೂದಾಗಿದೆ)
'ಬಂದೂಕು ಕೊಡಿ ಸುಡುತ್ತೇನೆ' ಎಂದರು
'ಏನೋ, ನನ್ನ ವಿರುದ್ಧ ನೀನು ಪಕ್ಷದ ಮುಖಂಡರನ್ನು ಎತ್ತಿ ಕಟ್ಟುತ್ತೀಯಾ?' ಎಂದು ಹೇಳಿ ನನ್ನ ಮೇಳೆ ಧಿಡೀರ್ ದಾಳಿ ನಡೆಸಿದ ಶಾಸಕ ಗಣೇಶ್, ನನ್ನ ಮುಖಕ್ಕೆ ಗುದ್ದಿ, ಗೋಡೆಗೆ ತಲೆಯನ್ನು ಗುದ್ದಿಸಿದರು. 'ಎಲ್ಲಿ ನನ್ನ ಬಂದೂಕು, ಇವನನ್ನು ಇಲ್ಲಿಯೇ ಮುಗಿಸುತ್ತೇನೆ, ಇವನು ನನ್ನ ರಾಜಕೀಯ ಮುಗಿಸುವ ಯತ್ನ ಮಾಡುತ್ತಿದ್ದಾನೆ, ನಾನು ಇವನನ್ನು ಮುಗಿಸುತ್ತೇನೆ' ಎಂದು ಕೂಗಾಡಿದರು ಎಂದು ಆನಂದ್ ಸಿಂಗ್ ಹೇಳಿಕೆ ದಾಖಲಿಸಿದ್ದಾರೆ.
'ಶಾಸಕ ಗಣೇಶ್ ಸಮಾಧಾನಕ್ಕೆ ಯತ್ನಿಸಿದೆ'
'ಆಗಲೂ ಕೂಡ ನಾನು , ಗಣೇಶ್ ನೋಡಪ್ಪ ನೀನು ನಮ್ಮ ಹುಡುಗ, ನನ್ನ ಸಹೋದರ ಸಮಾಜದಂತಿರುವ ವಾಲ್ಮೀಕಿ ಸಮಾಜದವನು, ನೀನು ಸಹ ನನ್ನ ಸಹೋದರನಿದ್ದಂತೆ ಇಲ್ಲಸದ್ದನ್ನು ತಲೆಯಲ್ಲಿಟ್ಟುಕೊಂಡು ಹೀಗೆ ಮಾಡಬೇಡ' ಎಂದು ಬುದ್ದಿ ಹೇಳಿದೆ ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಶಾಸಕರ ನಡುವಿನ ಗಲಾಟೆ : ಆನಂದ್ ಸಿಂಗ್ ಫೋಟೋ ವೈರಲ್
'ಹೂವಿನ ಕುಂಡ ನನ್ನ ಮೇಲೆ ಎಸೆದರು'
ನಾನು ಅಷ್ಟು ಮಾತನಾಡಿದರೂ ಕೇಳದೆ, ನಿನ್ನನ್ನು ಈಗಲೇ ಮುಗಿಸುತ್ತೇನೆ, ಈ ಸಮಯಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ, ಬಾ ಈಗ ಸಾಯುವ ಸಮಯ ಬಂದಿದೆ' ಎಂದು ಹೇಳುತ್ತಾ, ರೆಸಾರ್ಟ್ನಲ್ಲಿದ್ದ ಹೂವಿನ ಕುಂಡವನ್ನು ನನ್ನ ಮೇಲೆ ಎಸೆದರು, ಅದು ತಲೆಗೆ ತಾಗಿ ಪೆಟ್ಟಾಯಿತು ಎಂದು ಆನಂದ್ ಸಿಂಗ್ ತಮಗೆ ಗಾಯವಾದ ಬಗೆಯನ್ನು ಪೊಲೀಸರ ಮುಂದೆ ವಿವರಿಸಿದ್ದಾರೆ.
'ಹೊಟ್ಟೆಗೆ ಗುದ್ದಿದರು, ನನಗೆ ಪ್ರಜ್ಞೆ ಹೋಯಿತು'
ಅಷ್ಟು ಆದರೂ ಸಹ ಮುಷ್ಟಿಯಿಂದ ನನ್ನ ಕಿಬ್ಬೊಟ್ಟೆಗೆ ಬಹುವಾಗಿ ಹೊಡೆದರು. ಆ ನಂತರ ನಾನು ಅರೆಪ್ರಜ್ಞಾವಸ್ಥೆಗೆ ತಲುಪಿದೆ, ಆ ನಂತರ ಏನಾಯಿತು ಎಂದು ನನಗೆ ಗೊತ್ತಾಗಿಲ್ಲ. ನಾನು ಕಣ್ಣು ಬಿಟ್ಟಾದ ಶೇಷಾದ್ರಿಪುರಂನ ಅಪೋಲೊ ಆಸ್ಪತ್ರೆಯಲ್ಲಿದ್ದೆ. ಹಾಗಾಗಿ ಈ ದೂರನ್ನು ಒಂದು ದಿನ ತಡವಾಗಿ ನೀಡುತ್ತಿದ್ದೇನೆ ಎಂದು ಆನಂದ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ.
ಬಿಜೆಪಿಗೆ ವರದಾನವಾಗಿ ಪರಿಣಮಿಸಿದ 'ಕೈ' ಶಾಸಕರ ಬಡಿದಾಟ!
'ನನಗೆ ಜೀವ ಬೆದರಿಕೆ ಇದೆ'
ನನಗೆ ಜೀವಬೆದರಿಕೆ ಇದ್ದು, ನನ್ನನ್ನು ಕೊಲ್ಲುವ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನನಗೆ ತೀವ್ರತೆರನಾದ ಹಲ್ಲೆ ಮಾಡಿದ ಶಾಸಕ ಗಣೇಶ್ ಅವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಂಡು ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು ಎಂದು ಶಾಸಕ ಆನಂದ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿದ್ದಾರೆ.