ಯೋಗಿ ಆದಿತ್ಯನಾಥ್ ಮಹಿಳಾ ವಿರೋಧಿ : ಸಿದ್ದರಾಮಯ್ಯ
ಭಾನುವಾರ ಹೆಬ್ಬಾಳದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 2018ರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭ 2018ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು, ಮಾರ್ಚ್ 20 : 2018ರ ಕರ್ನಾಟಕ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ 'ಮಾಡು ಇಲ್ಲವೇ ಮಡಿ' ಕದನವಾಗಿದೆ. ಹೀಗಾಗಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಬಲುಬೇಗ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ದುಮುಕಿದೆ.
ಭಾನುವಾರ ಹೆಬ್ಬಾಳದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ 2018ರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. ಮಾತ್ರವಲ್ಲ 2018ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. [ನಮಸ್ಕಾರ, ದಿಗ್ವಿಜಯ್ ಸಿಂಗ್ ಸರ್, ಹೋಗಿ ಬನ್ನಿ!]
ಬಿಜೆಪಿ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷ ಬಿಜೆಪಿಗೆ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು. ಅಧಿವೇಶನದಲ್ಲಿ ಭಾಗವಹಿಸಿ ಬರ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳಿ. ನಕಲಿ ಡೈರಿ ವಿಚಾರ ಹಿಡಿದುಕೊಂಡು ಸುಮ್ಮನೆ ನನ್ನ ಮೇಲೆ ದಾಳಿ ಮಾಡಬೇಡಿ ಎಂದು ಹೇಳಿದರು.[ಮಾಂಸದಂಗಡಿಗೆ ಸಹಾಯಧನ, ಕುತೂಹಲ ಹುಟ್ಟಿಸಿದ ಸಿದ್ದರಾಮಯ್ಯ ನಡೆ]
ಆದಿತ್ಯನಾಥ್ ಮಹಿಳಾ ವಿರೋಧಿ
ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡುತ್ತದೆ. ಆದರೆ ಮಹಿಳಾ ಮೀಸಲಾತಿಯನ್ನು ವಿರೋಧಿಸುವ ವ್ಯಕ್ತಿಯನ್ನು ಬಿಜೆಪಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಮಾಡಿದೆ ಎಂದು ಹರಿಹಾಯ್ದರು.
ಮಹಿಳೆಯರಿಗೆ ಸಮಾನ ಹಕ್ಕು ಮುಖ್ಯ
ಯಾವುದೇ ಸಮಾಜ ಸುಧಾರಣೆಯಾಗಬೇಕಾದರೆ ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗುವುದು ಬಹಳ ಮುಖ್ಯ. ಅಕ್ಷರತೆ ಮತ್ತು ಶಿಕ್ಷಣ ಕಡಿಮೆ ಇದ್ದಾಗ ಶೋಷಣೆಗಳು ನಡೆಯುತ್ತವೆ. ಇದೇ ಕಾರಣಕ್ಕೆ ಶಿಕ್ಷಣ ನೀಡುವುದು ನನ್ನ ಸರಕಾರದ ಮುಖ್ಯ ಗುರಿ. ಕಳೆದ ನಾಲ್ಕು ವರ್ಷಗಳಲ್ಲಿ ಆರ್.ಟಿ.ಇ ಮೂಲಕ 4 ಲಕ್ಷ ಜನರಿಗೆ ಶಿಕ್ಷಣ ಸಿಗುವಂತಾಗಲು ನಾನು ಶ್ರಮ ಮೀರಿ ದುಡಿದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹಿಳಾ ದಿನಾಚರಣೆ
ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಹೆಬ್ಬಾಳದಲ್ಲಿ ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಬೈರತಿ ಸುರೇಶ್ ಈ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಮಹಿಳಾ ಮತದಾರರು ಪಾಲ್ಗೊಂಡಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಹೆಬ್ಬಾಳ ಜನರ ಅನುಕೂಲಕ್ಕೆ ಜಾರಿಗೆ ತಂದ ಆ್ಯಂಬುಲೆನ್ಸ್ ಸೇವೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು.
ಮನೆ ಮನೆ ಜಾಗೃತಿ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಬೈರತಿ ಸುರೇಶ್, ಜನರ ಕಲ್ಯಾಣಕ್ಕೆ ನಾವು ಬದ್ಧವಾಗಿದ್ದೇವೆ. ಈ ಕಾರ್ಯಕ್ರಮ ಆರಂಭ ಅಷ್ಟೆ. ಮುಂದಿನ ದಿನಗಳಲ್ಲಿ ಹೆಬ್ಬಾಳದ ಮಹಿಳೆಯರು ಜನರ ಜತೆ ಸಂಪರ್ಕ ಸಾಧಿಸದಲು ಮನೆ ಮನೆ ಭೇಟಿ ಮಾಡಲಿದ್ದಾರೆ. ಈ ಮೂಲಕ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರು.
ಹಲವು ನಾಯಕರು ಭಾಗಿ
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ದಂಡೇ ನೆರೆದಿತ್ತು. ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್, ರಿಜ್ವಾನ್ ಅರ್ಷದ್, ಮೇಹರ್ ಜಿ ಪದ್ಮಾವತಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಹೆಬ್ಬಾಳ ಫ್ಲೈ ಓವರನ್ನು ವಿಸ್ತರಣೆ ಮಾಡಿದ್ದಕ್ಕೆ ಸ್ಥಳೀಯ ಜನ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.
ಜನರ ಜತೆ ಸಂಪರ್ಕದಲ್ಲಿರಿ. ಇದರಿಂದ ಮುಂಬರಲಿರುವ ಚುನಾವಣೆ ಗೆಲ್ಲಲು ಸಾಧ್ಯ ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕರು ಕರೆ ನೀಡಿದರು.