ಮೋದಿ, ಶಾ ಅವರಿಂದಲೇ ಬಿಜೆಪಿಗೆ ಕುತ್ತು: ದಿನೇಶ್ ಗುಂಡೂರಾವ್
ಬೆಂಗಳೂರು, ಡಿಸೆಂಬರ್ 28: ಕಾಂಗ್ರೆಸ್ ಮುಕ್ತ ಎಂಬ ಬಿಜೆಪಿಯ ಅಭಿಯಾನವೇ ಅಂತ್ಯವಾಗಿದೆ. 134 ವರ್ಷಗಳಿಂದಲೂ ಕಾಂಗ್ರೆಸ್ಸಿಗರಿಗೆ ಅದೇ ಉತ್ಸಾಹವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಇದ್ದ ಬಿಜೆಪಿಯೇ ಬೇರೆ, ಮೋದಿ ಇರುವ ಬಿಜೆಪಿಯೇ ಬೇರೆ ಎಂದಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಅವರ ತಪ್ಪಿನಿಂದಾಗಿ ಬಿಜೆಪಿ ಪರಿತಪಿಸುವಂತಾಗಿದೆ. ಮೋದಿ, ಶಾ ಅವರ ಬಿಜೆಪಿಯನ್ನು ತೆಗೆದುಹಾಕಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹನುಮಂತಪ್ಪ, ಕಾಂಗ್ರೆಸ್ ಪ್ರಧಾನಿಯಾಗಲು ಸ್ವಲ್ಪ ಕೆಲಸ ಮಾಡಿದರೆ ಸಾಲುವುದಿಲ್ಲ. ಕಾರ್ಯಕರ್ತರಿಗೆ ಹಿರಿಯರು ಸೂಚನೆ ನೀಡಬೇಕು. ಆದರೆ, ಹಿರಿಯರಿಂದ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಪಕ್ಷದ ಮುಖಂಡರ ಬಗ್ಗೆ ಅಸಮಾಧಾನ ಹೊರಹಾಕಿದರು.
ಚುನಾವಣೆಗೆ ಇನ್ನು ಮೂರು-ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಆದರೆ, ಗೆದ್ದವರಿಗೆ ಅಧಿಕಾರ ಸಿಕ್ಕಿಲ್ಲ. ಅಧಿಕಾರ ಸಿಕ್ಕವರಿಗೆ ದೊರೆತ ಖಾತೆಗಳು ಸಮಾಧಾನ ಮೂಡಿಸಿಲ್ಲ. ನಮ್ಮಲ್ಲಿ ಕಾರ್ಯಕರ್ತರಿಲ್ಲ. ಈಗಲೂ ನಾವು ಕುರ್ಚಿಗಾಗಿ ಹುಡುಕಾಟ ನಡೆಸಬೇಕಾದ ಭಯಾನಕ ಸ್ಥಿತಿಯಲ್ಲಿದ್ದೇವೆ. ಹಿರಿಯ ನಾಯಕರು ಬಿಜೆಪಿ ವಿರುದ್ಧ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.
ಹನುಮಂತಪ್ಪ ಅವರ ಹೇಳಿಕೆ ವೇದಿಕೆಯಲ್ಲಿದ್ದ ಮುಖಂಡರಿಗೆ ಮುಜುಗರ ಉಂಟುಮಾಡಿತು.