ಕಾಂಗ್ರೆಸ್ ನಿಂದ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು: ಅಮಿತ್ ಶಾ
ಬೆಂಗಳೂರು, ಏಪ್ರಿಲ್ 18: ನಗರದ 28 ವಿಧಾನಸಭೆ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರನ್ನು ಉದ್ದೇಶಿಸಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಷಣ ಮಾಡಿದರು. ಈ ವೇಳೆ ಅವರು ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
"ಕೇಸರಿ ಭಯೋತ್ಪಾದನೆ ಮತ್ತು ಹಿಂದು ಭಯೋತ್ಪಾದನೆ ಪದ ಪ್ರಯೋಗಿಸಿ ಕಾಂಗ್ರೆಸ್ ಹಲವಾರು ವರ್ಷಗಳ ಕಾಲ ಭಾರತದ ಮಾನವನ್ನು ಜಾಗತಿಕವಾಗಿ ಹರಾಜು ಹಾಕಿದೆ. ರಾಹುಲ್ ಅವರೇ ಭಯೋತ್ಪಾದನೆಗೆ ಧರ್ಮವಿಲ್ಲ," ಎಂದು ಅವರು ಕಿಡಿಕಾರಿದರು.
ಚಿದಾನಂದಮೂರ್ತಿ, ಸಿದ್ದಲಿಂಗಯ್ಯರ ಭೇಟಿ ಮಾಡಿದ ಅಮಿತ್ ಶಾ
"ಆದರೆ ಇವತ್ತು ಕಾಂಗ್ರೆಸ್ ನಾವು ಯಾವತ್ತೂ ಕೇಸರಿ ಭಯೋತ್ಪಾದನೆ ಪದ ಬಳಸಿಲ್ಲ ಎನ್ನುತ್ತಾರೆ. ಹಲವು ಕಾಂಗ್ರೆಸ್ ನಾಯಕರು ಈ ಪದ ಬಳಸಿದ್ದಾರೆ. ಸಿದ್ದರಾಮಯ್ಯನವರೂ ಈ ಪದ ಬಳಕೆ ಮಾಡಿದ್ದಾರೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಒಂದು ಕಾಲದಲ್ಲಿ ರಾಜೀವ್ ಗಾಂಧಿ ನಮಗೆ ಲೇವಡಿ ಮಾಡುತ್ತಿದ್ದರು. ನಮ್ಮ ಬಳಿಯಲ್ಲಿ ಇಬ್ಬರು ಸಂಸದರಿದ್ದಾಗ, 'ಬಿಜೆಪಿ ನಾವಿಬ್ಬರು ನಮಗಿಬ್ಬರು ಘೋಷಣೆಯಲ್ಲಿ ನಂಬಿಕೆ ಹೊಂದಿದೆ ಎನ್ನುತ್ತಿದ್ದರು. ಇವತ್ತು ಬಿಜೆಪಿಗೆ ಸಂಸತ್ ನಲ್ಲಿ ಸಂಪೂರ್ಣ ಬಹುಮತ ಇದೆ. 1600 ಕ್ಕೂ ಹೆಚ್ಚು ಶಾಸಕರು, 20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮತ್ತು ಹಲವಾರು ಸ್ಥಳೀಯ ಸಂಸ್ಥಗಳು ಮತ್ತು ಪಾಲಿಕೆಗಳಲ್ಲಿ ನಾವು ಅಧಿಕಾರದಲ್ಲಿದ್ದೇವೆ," ಎಂದು ಅವರು ಹೇಳಿದರು.
ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ
ಇದಕ್ಕೂ ಮೊದಲು ಬಸವಣ್ಣನವರ ಜಯಂತಿಯ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಅಮಿತ್ ಶಾ ಜಗಜ್ಯೋತಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದಾರೆ ಅಣ್ಣ ಬಸವಣ್ಣ. ಕರುನಾಡು ತನ್ನ ಆಚಾರ ವಿಚಾರಗಳೊಂದಿಗೆ ಮತ್ತೆ ಸ್ವರ್ಗದಂತಾಗಲಿ ಎಂದು ಆಶಿಸೋಣ. ಕಾಯಕ, ದಾಸೋಹ, ಸಮಾನತೆಯ ತತ್ತ್ವ ಬೋಧಿಸಿದ ಮಹಾನ್ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ 885ನೇ ಜಯಂತಿಯ ಸಂದರ್ಭದಲ್ಲಿ ನಮ್ಮ ಆಶಯಗಳು ಅಕ್ಷಯವಾಗಲಿ, ಎಲ್ಲರಿಗೂ ಶುಭಾಶಯಗಳು. pic.twitter.com/NPveYNvjnI
— Amit Shah (@AmitShah) April 18, 2018