ದರ್ಶನ್, ಸುದೀಪ್ ಸೆಳೆಯಲು ರಾಜಕೀಯ ಪಕ್ಷಗಳ ತಂತ್ರ!
ದರ್ಶನ್, ಸುದೀಪ್ ಅವರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಯತ್ನ ಪಡುತ್ತಿರುವ ಬಗ್ಗೆ ಗಾಸಿಪ್. ಇದನ್ನು ಒಪ್ಪಿಕೊಳ್ಳದಿದ್ದರೂ ನೇರವಾಗಿ ತಳ್ಳಿಹಾಕದ ರಾಜಕೀಯ ನಾಯಕರು.
ಬೆಂಗಳೂರು, ಸೆಪ್ಟಂಬರ್ 1: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸ್ಟಾರ್ ನಟರನ್ನು ತಮ್ಮ ಪ್ರಚಾರಕ್ಕೆ ಬಳಸಲು ಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್, ಈಗಾಗಲೇ ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಅವರ ಸಂಪರ್ಕಿಸಿವೆ.
ಕಳೆದರಡು ದಿನಗಳ ಹಿಂದೆ ದರ್ಶನ್ ಕಾಂಗ್ರೆಸ್ ಸೇರುತ್ತಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಗುಸುಗುಸು ಆರಂಭವಾಗಿತ್ತು. ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಿದ್ದ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ. ಪರಮೇಶ್ವರ್, ದರ್ಶನ್ ಸೇರುವ ವಿಚಾರ ತಮಗೆ ಗೊತ್ತಿಲ್ಲವೆಂದಿದ್ದರು.
ನಟ ದರ್ಶನ್ ಕಾಂಗ್ರೆಸ್ ಸೇರ್ಪಡೆ ಆಗ್ತಾರಾ? ಈ ಬಗ್ಗೆ ಪರಮೇಶ್ವರ್ ಏನಂದ್ರು?
ದರ್ಶನ್ ಅವರ ತಾಯಿ ನಮ್ಮ ಪಕ್ಷದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಬಗ್ಗೆ ಅವರು ನನ್ನ ಬಳಿ ಎಂದೂ ಚರ್ಚಿಸಿಲ್ಲ. ಹಾಗಾಗಿ, ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದಿದ್ದರು.
ಪರಮೇಶ್ವರ್ ಅವರ ಈ ಹೇಳಿಕೆ ಬೆನ್ನಲ್ಲೇ, ಬಿಜೆಪಿ ನಾಯಕ ಸಿ.ಟಿ. ಅವರು ದರ್ಶನ್ ಅವರನ್ನು ಬಿಜೆಪಿ ಪಕ್ಷ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಆದರೆ, ಅದರ ಬೆನ್ನಲ್ಲೇ ಜಾತ್ಯಾತೀತ ಜನತಾ ದಳ (ಜೆಡಿಎಸ್) ಧುರೀಣರಾದ ಎಚ್.ಡಿ. ದೇವೇಗೌಡರೂ, ದರ್ಶನ್ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿರುವುದು ಈಗ ಮತ್ತಷ್ಟು ಕುತೂಹಲ ಕೆರಳಿಸಿದೆ.
ನಿರ್ಧಾರ ಕೈಗೊಂಡಿಲ್ಲ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷರು
ಜಿ. ಪರಮೇಶ್ವರ್ ಅವರ ಹೇಳಿಕೆಯಿಂದ ಸಂತೃಪ್ತರಾಗದ ಮಾಧ್ಯಮಗಳು, ಈ ಬಗ್ಗೆ ಮತ್ತಷ್ಟು ಕೆದಕಿದ್ದವು. ದರ್ಶನ್ ಪಕ್ಷಕ್ಕೆ ಬಾರದಿದ್ದರೂ, ಮುಂಬರುವ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವಿರಾ ಎಂಬ ಪ್ರಶ್ನಿಸಿದ್ದವು. ಇದಕ್ಕೆ ಉತ್ತರಿಸಿದ್ದ ಪರಮೇಶ್ವರ್, ಪ್ರಚಾರಕ್ಕಾಗಿ ಸ್ಟಾರ್ ನಟರನ್ನು ಬಳಸಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದರು.
ಕಾಂಗ್ರೆಸ್ಸನ್ನು ಮುಳುಗುವ ಹಡಗಿಗೆ ಹೋಲಿಕೆ
ಕಾಂಗ್ರೆಸ್ ಗೆ ದರ್ಶನ್ ಸೇರ್ಪಡೆ ಕುರಿತಂತೆ ವ್ಯಂಗ್ಯವಾಡಿದ ಬಿಜೆಪಿಯ ಸಿ.ಟಿ. ರವಿ, ಯಾರಾದರೂ ಮುಳುಗುವ ಹಡಗನ್ನು ಹತ್ತಲು ಹೋಗುತ್ತಾರೆಯೇ? ಹಾಗೆಯೇ ದರ್ಶನ್ ಅವರು ಕಾಂಗ್ರೆಸ್ ಸೇರುವ ಮೂರ್ಖತನ ಮಾಡಲಾರರು ಎಂದು ಹೇಳಿದ್ದಾರೆ. ದರ್ಶನ್ ಅವರನ್ನು ಬಿಜೆಪಿ ಬಳಸಿಕೊಳ್ಳುತ್ತದೆಯೇ ಎಂಬುದಕ್ಕೆ ನೇರವಾಗಿ ಉತ್ತರಿಸದ ಅವರು, ನಮ್ಮಲ್ಲಿ ನಮ್ಮ ಕಾರ್ಯಕರ್ತರೇ ಸ್ಟಾರ್ ಗಳು ಎಂದರು.
ಕುಮಾರ ಸ್ವಾಮಿ ಕಡೆಗೆ ಕೈ ತೋರಿಸಿದ ದೇವೇಗೌಡ
ಜೆಡಿಎಸ್ ಧುರೀಣ ದೇವೇಗೌಡರೂ ದರ್ಶನ್ ಬಗ್ಗೆ ಸಕಾರಾತ್ಮಕವಾಗಿಯೇ ಮಾತನಾಡಿದ್ದಾರೆ. ಅವರು ಹೇಳುವ ಪ್ರಕಾರ, ಜನರನ್ನು ಸೆಳೆಯುವ ವರ್ಚಸ್ಸು ದರ್ಶನ್ ಅವರಿಗೆ ಇದೆ. ಆದರೆ, ಅವರನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ನಾನೇನೂ ಹೇಳಲಾರೆ. ಇದನ್ನು ಪಕ್ಷದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಅವರು ನಿರ್ಧರಿಸಲಿದ್ದಾರೆ.
ಅಗತ್ಯ ಬಿದ್ದರೆ ನಾನೇ ಸುದೀಪ್ ಬಳಿ ಮಾತನಾಡುವೆ: ಅಶೋಕ್
ಇನ್ನು, ನಟ ಸುದೀಪ್ ಅವರನ್ನು ಬಿಜೆಪಿ ಸೆಳೆಯಲು ನಿರ್ಧರಿಸಿದೆ ಎಂಬ ವದಂತಿಗಳಿಗೆ ಮಾಜಿ ಮುಖ್ಯಮಂತ್ರಿ ಆರ್.ಅಶೋಕ್ ಅವರು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಶುಕ್ರವಾರ (ಸೆಪ್ಟಂಬರ್ 1) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸುದೀಪ್ ಅವರನ್ನು ಬಿಜೆಪಿ ಪರವಾಗಿ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸುದೀಪ್ ನನಗೆ ಉತ್ತಮ ಸ್ನೇಹಿತರು. ಸಮಯ ಬಂದರೆ ನಾನು ಈ ಬಗ್ಗೆ ಸುದೀಪ್ ಜತೆ ಮಾತನಾಡಲು ಸಿದ್ಧ'' ಎಂದು ತಿಳಿಸಿದ್ದಾರೆ.