'ಕಾಂಗ್ರೆಸ್ ನಲ್ಲಿ ಒಡಕು, ಜೆಡಿಎಸ್ ನಲ್ಲಿ ಬಿಕ್ಕಟ್ಟು, ಬಿಜೆಪಿಯಲ್ಲಿ ಒಗ್ಗಟ್ಟು'
ಬೆಂಗಳೂರು, ಜೂನ್ 9 : ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ದಿನದಿಂದ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನಕ್ಕಾಗಿ ಬಿಕ್ಕಟ್ಟು ಮುಂದುವರೆದಿದೆ. ಇನ್ನು ಜೆಡಿಎಸ್ ನಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಇದ್ದು, ಕೇವಲ ಭಾರತೀಯ ಜನತಾ ಪಕ್ಷದಲ್ಲಿ ಒಗ್ಗಟ್ಟು ಕಾಣಿಸುತ್ತಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಾದ ಅನಂತಕುಮಾರ್ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ವ್ಯಾಖ್ಯಾನಿಸಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ಬಹಿರಂಗ ಪ್ರಚಾರದ ಕೊನೆಯ ದಿನವಾದ ಶನಿವಾರ, ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಬೃಹತ್ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ದಕ್ಷಿಣ ಶಾಸಕರಾದ ಎಂ ಕೃಷ್ಣಪ್ಪ, ಅಭ್ಯರ್ಥಿ ಬಿ.ಎನ್ ಪ್ರಹ್ಲಾದ್, ಮಾಜಿ ಮಹಾಪೌರರಾದ ಎಸ್ ಕೆ ನಟರಾಜ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಮೈತ್ರಿ ಸರಕಾರ 'ತಾತ್ಕಾಲಿಕ' ಎಂದ ಅನಂತ್ ಕುಮಾರ್ ಮಾತಿನ ಅರ್ಥವೇನು?
ಜೆ.ಪಿ ನಗರ ಒಂದನೇ ಹಂತದಿಂದ ಸಾಗಿದ ಬೈಕ್ ಜಾಥಾ, ರಾಗಿಗುಡ್ಡ, ಜೆ.ಪಿ.ನಗರ ಮೂರನೇ ಹಂತ, ಸಾರಕ್ಕಿ, ಶಾಕಾಂಬರಿ ನಗರ, ಜಯನಗರ 5ನೇ ಹಾಗೂ 7ನೇ ಬ್ಲಾಕ್ನ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಕ್ಷೇತ್ರದ ಅಭಿವೃದ್ದಿಗಾಗಿ 20 ವರ್ಷ ಶ್ರಮಿಸಿದ್ದ ದಿವಂಗತ ಬಿ.ಎನ್ ವಿಜಯಕುಮಾರ್ ಅವರು ಜಯನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಆದರೆ, ಈಗ ಅಧಿಕಾರದ ಆಸೆಗಾಗಿ ಹೊರಗಿನಿಂದ ಬಂದಿರುವ ಅಭ್ಯರ್ಥಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈಗಾಗಲೇ ರಾಮಲಿಂಗಾರೆಡ್ಡಿ ಸಚಿವ ಸ್ಥಾನದಿಂದ ವಂಚಿತರಾಗುವುದರೊಂದಿಗೆ ಕಾಂಗ್ರೆಸ್ ನಲ್ಲಿ ಒಂದು ವಿಕೆಟ್ ಪತನಗೊಂಡಿದ್ದು, ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಜಯಗೊಳ್ಳುವುದರೊಂದಿಗೆ ಎರಡನೇ ವಿಕೆಟ್ ಪತನಗೊಳ್ಳಲಿದೆ. ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನೊಂದಿಗೆ ಸರಕಾರದ ಪತನಕ್ಕೆ ಕ್ಷಣಗಣನೆಯೂ ಆರಂಭವಾಗಲಿದೆ ಎಂದು ಹೇಳಿದರು.
ಜಯನಗರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?, ಜೆಡಿಎಸ್ ಪ್ರಚಾರ ಸ್ಥಗಿತ
ಕ್ಷೇತ್ರದಲ್ಲಿ ವಿಜಯಕುಮಾರ್ ಅವರ ಸಾಮಾಜಿಕ ಸೇವಾ ಮನೋಭಾವ ಹಾಗೂ ಸಜ್ಜನಿಕೆಯಿಂದ ಕ್ಷೇತ್ರದಲ್ಲಿ ಶಾಂತಿ ಇದೆ. ಬಿ ಎನ್ ಪ್ರಹ್ಲಾದ್ ಅವರು ವಿಜಯಕುಮಾರ ಅವರ ಸಂಕೇತವಾಗಿದ್ದಾರೆ. ಗೂಂಡಾಗಿರಿ, ದಾದಾಗಿರಿಯಿಂದ ಕ್ಷೇತ್ರವನ್ನು ಮುಕ್ತಮಾಡಲು ಬಿ ಎನ್ ಪ್ರಹ್ಲಾದ್ ಅವರನ್ನು 25 ಸಾವಿರಕ್ಕೂ ಹೆಚ್ಚು ಅಧಿಕ ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ನಗರಪಾಲಿಕೆ ಸದಸ್ಯರು ಹಾಗೂ ಮುಖಂಡರು ಒಗ್ಗಟ್ಟಿನಿಂದ ತಮ್ಮ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ. ಪ್ರಚಾರ ಯಶಸ್ವಿಯಾಗಿದೆ. ಆದರೆ, ಕೆಲ ಶಕ್ತಿಗಳು ಅಪಪ್ರಚಾರ ನಡೆಸುತ್ತಿದ್ದು ಅವರ ಪ್ರಯತ್ನ ವಿಫಲವಾಗಲಿದೆ ಎಂದರು.