ಮೆಟ್ರೋ ರೈಲಿನಲ್ಲಿ ಮತ್ತೆ ಕಾಣಿಸಿಕೊಂಡ ತಾಂತ್ರಿಕ ದೋಷ: ಆತಂಕ
ಬೆಂಗಳೂರು, ಮೇ 13: ವಾರದ ಅಂತರದಲ್ಲಿ 2 ನೇ ಬಾರಿ ನಮ್ಮ ಮೆಟ್ರೋ ರೈಲಿನಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಪ್ರಯಾಣಿಕರು ಆತಂಕಗೊಂಡರು. ಶನಿವಾರ ಮಧ್ಯಾಹ್ನ 3.14ರಿಂದ 3.33 ಗಂಟೆಯವರೆಗೆ ವಿಧಾನ ಸೌಧ, ಸರ್.ಎಂ.ವಿಶ್ವೇಶ್ವರಯ್ಯ ಸೇರಿದಂತೆ ನೇರಳೆ ಮಾರ್ಗದ ಕೆಲ ನಿಲ್ದಾಣಗಳಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.
ಮೇ ತಿಂಗಳಲ್ಲಿ ರೈಲು ಸಂಚಾರದ ವೇಳೆ ದಿಢೀರನೆ ಸ್ಥಗಿತಗೊಂಡ ಎರಡನೇ ಘಟನೆ ಇದಾಗಿದೆ. ಮೇ 7ರಂದು ಹಳಿ ಬದಲಿಸುವ ವ್ಯವಸ್ಥೆಯ ಸಿಗ್ನಲ್ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ರೈಲು ಸ್ಥಗಿತಗೊಂಡಿತ್ತು. ಇದರಿಂದಾಗಿ ಸಾವಿರಾಋಉ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಶನಿವಾರ ಮಧ್ಯಾಹ್ನ ಘಟನೆ ಪುನರಾವರ್ತನೆಯಾಗಿದೆ.
ತಾಂತ್ರಿಕ ದೋಷ: ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ವ್ಯತ್ಯಯ
ಮಧ್ಯಾಹ್ನ 3.14ರ ವೇಳೆಗೆ ಮೆಜೆಸ್ಟಿಕ್ ನಿಲ್ದಾದಲ್ಲಿ ಥರ್ಡ್ ರೇಲ್ಗೆ ವಿದ್ಯುತ್ ಪೂರೈಸುತ್ತಿದ್ದ ಕೇಬಲ್ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಕೂಡಲೇ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ರೈಲುಗಳ ಲೊಕೊ ಪೈಲಟ್ಗಳಿಗೆ ಹಾಗೂ ನಿಲ್ದಾಣಗಳ ನಿರ್ವಾಹಕರಿಗೆ ಸೂಚನೆ ನೀಡಿದ್ದರಿಂದ ಎಲ್ಲ ರೈಲುಗಳನ್ನು ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
ಸರ್.ಎಂ. ವಿಶ್ವೇಶ್ವರಯ್ಯ ಸುರಂಗ ನಿಲ್ದಾಣಕ್ಕೆ ಬಂದ ರೈಲು ಹೊರಡಿದ್ದಾಗ ಪ್ರಯಾಣಿಕರಿಗೆ ಅಚ್ಚರಿಯಾಯಿತು. ಎಷ್ಟು ಹೊತ್ತಾದರೂ ರೈಲು ಹೊರಡದಿದ್ದಾಗ ಭಯಗೊಂಡು ಕೆಲ ಪ್ರಯಾಣಿಕರು ಬಾಗಿಲು ತೆರೆದು ಹೊರಹೋಗಲು ಯತ್ನಿಸಿದರು.
ಪ್ರಯಾಣಿಕರು ಸಮಸ್ಯೆ ಏನೆಂದು ಸಿಬ್ಬಂದಿಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. 3.33 ಗಂಟೆಗೆ ರೈಲು ಸಂಚಾರ ಆರಂಭವಾಯಿತು. ಇದೇ ರೀತಿ ವಿಧಾನಸೌಧ, ಟ್ರಿನಿಟಿ ಸೇರಿಂದತೆ ಹಲವು ನಿಲ್ದಣಗಳಲ್ಲಿ ರೈಲು ಸಂಚಾರ ಸ್ಥಗಿತವಾಗಿತ್ತು. ಪ್ರಯಾಣಿಕರು ಭೀತಿಗೆ ಒಳಗಾಗದಂತೆ ಘೋಷಣೆಗಳನ್ನು ಹೊರಡಿಸಲಾಯಿತು.