ಅನಿಯಮಿತ ಲೋಡ್ ಶೆಡ್ಡಿಂಗ್ಗೆ ಕಾರಣ ಬಹಿರಂಗ
ಬೆಂಗಳೂರು, ನವೆಂಬರ್ 10 : ಪ್ರತಿ ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಸಾಮಾನ್ಯ. ಆದರೆ, ಈ ಬಾರಿ ಚಳಿಗಾಲಕ್ಕೂ ಮುನ್ನವೇ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗಿದೆ. ಇದಕ್ಕೆ ಕಲ್ಲಿದ್ದಲು ಅಭಾವವೇ ಕಾರಣವಾಗಿದೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿರುತ್ತದೆ. ನೀರಾವರಿಗೆ, ಗೃಹ ಬಳಕೆಗೆ ಹೆಚ್ಚಿನ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ. ಆದರೆ, ಬೇಸಿಗೆ ಆರಂಭಕ್ಕೂ ಮುನ್ನವೇ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.
ಪೂರೈಕೆಯಾಗುವ ಕಲ್ಲಿದ್ದಲನ್ನು ಅದೇ ದಿನ ಬಳಕೆ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಗಣಿಗಳಿಲ್ಲ. ಅದು ಹೊರ ರಾಜ್ಯಗಳ ಗಣಿಗಳಿಂದ ರೈಲಿನಲ್ಲಿ ಬರಬೇಕು. ಅಲ್ಲದೆ ನಮ್ಮ ರಾಜ್ಯದ ವಿದ್ಯುತ್ ಉತ್ಪಾದನೆಯ ಗಣನೀಯ ಭಾಗ ಶಾಖೋತ್ಪನ್ನ ಘಟಕಗಳನ್ನೇ ಅವಲಂಬಿಸಿದೆ.
ಕಲ್ಲಿದ್ದಲನ್ನು ದಾಸ್ತಾನು ಮಾಡಿಕೊಳ್ಳದೇ ಇರುವುದು ಲೋಡ್ ಶೆಡ್ಡಿಂಗ್ಗೆ ಕಾರಣವಾಗಿವೆ. ಕಲ್ಲಿದ್ದಲು ಕೊರತೆ ಉಂಟಾದಾಗ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುತ್ತಿದೆ. ಖಾಸಗಿ ವಲಯದ ಉಡುಪಿ ಪವರ್ ಕಾರ್ಪೊರೇಷನ್ ಘಟಕದಲ್ಲೂ ತಾಂತ್ರಿಕ ತೊಂದರೆಯಾಗಿದೆ. ಆದ್ದರಿಂದ, ಅಲ್ಲಿಂದಲೂ ಪೂರ್ಣ ಪ್ರಮಾಣದ ವಿದ್ಯುತ್ ಸಿಗುತ್ತಿಲ್ಲ.
ಪೂರ್ವ ಸೂಚನೆ ನೀಡದೆ ವಿದ್ಯುತ್ ಕಡಿತ ಮಾಡುವಂತಿಲ್ಲ ಎಂದು ವಿದ್ಯುತ್ ನಿಯಂತ್ರಣ ಆಯೋಗ ಆದೇಶ ನೀಡಿದೆ. ಆದರೆ, ಅದನ್ನು ಪಾಲಿಸುತ್ತಿಲ್ಲ. ಕಲ್ಲಿದ್ದಲು ಪೂರೈಕೆ ಸರಿಯಾಗಿ ಆಗುವ ತನಕ ಲೋಡ್ ಶೆಡ್ಡಿಂಗ್ ಸಮಸ್ಯೆ ಮುಂದುವರೆಯಲಿದೆ.