ನೋಟು ನಿಷೇಧ: ಕೇಂದ್ರಕ್ಕೆ ಪತ್ರ ಬರೆದ ಸಿದ್ದು
ನೋಟು ನಿಷೇಧ ಹೇರಿ ಆದೇಶ ಹೊರಡಿಸಿರುವ ನಿಯಮಾವಳಿಗಳಲ್ಲಿ ಬದಲಾವಣೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬೆಂಗಳೂರು, ನವೆಂಬರ್, 17: ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಹಳೆ ನೋಟುಗಳ ವಿನಿಮಯಕ್ಕೆ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ.
ರೈತರ ಅನುಕೂಲಕ್ಕಾಗಿ ಎಲ್ಲ ಜಿಲ್ಲಾ ಸಹಕಾರ ಬ್ಯಾಂಕ್ ಗಳಲ್ಲೂ ಹಳೆ ನೋಟುಗಳ ವಿನಿಮಯಕ್ಕೆ ಅವಕಾಶ ಕಲ್ಪಿಸಬೇಕೆಂದು ವಿತ್ತ ಸಚಿವ ಮತ್ತು ರಿಸರ್ವ್ ಬ್ಯಾಂಕ್ ಮುಖ್ಯಸ್ಥರಲ್ಲಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ನವೆಂಬರ್ 14 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಪರಿಷ್ಕರಿಸುವಂತೆ ಅವರು ತಿಳಿಸಿದ್ದಾರೆ.
ಹಲವು ರೈತರು ಸಹಕಾರಿ ಬ್ಯಾಂಕ್ ಗಳಲ್ಲೇ ಖಾತೆಯನ್ನು ಹೊಂದಿದ್ದಾರೆ. ಮತ್ತು ಸಹಕಾರಿ ಬ್ಯಾಂಕ್ ಗಳಲ್ಲೇ ಸಾಲ ಪಡೆದುಕೊಂಡಿದ್ದಾರೆ. ಆದ್ದರಿಂದ ಅವರ ಅನುಕೂಲಕ್ಕಾಗಿ ಸಹಕಾರಿ ಬ್ಯಂಕ್ ಗಳಲ್ಲಿ ನೋಟು ಬದಲಾವಣೆಗೆ ಅವಕಾಶ ಕಲ್ಪಿಸುವಂತೆ ಕೋರಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ 21 ಡಿಸಿಸಿ ಬ್ಯಾಂಕ್ ಗಳಿದ್ದು, ಈ ಬ್ಯಾಂಕ್ ಗಳು ಒಟ್ಟು 706 ಶಾಖೆಗಳನ್ನು ರಾಜ್ಯದಾದ್ಯಂತ ಹೊಂದಿವೆ. 45.91ಲಕ್ಷ ಠೇವಣಿ ಖಾತೆದಾರರನ್ನು ಮತ್ತು 21.73ಲಕ್ಷ ಸಾಲ ಪಡೆದಿರುವ ಗ್ರಾಹಕರನ್ನು ಹೊಂದಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಲವು ರೈತರು ಬೆಳೆ ಸಾಲಗಳನ್ನು ಸಹಕಾರ ಬ್ಯಾಂಕ್ ಗಳ ಮೂಲಕವೇ ಪಡೆದುಕೊಂಡಿದ್ದಾರೆ. ನಿಗದಿತ ದಿನಾಂಕದೊಳಗೆ ಅವರು ಬೆಳೆ ಸಾಳ ಮರುಪಾವತಿ ಮಾಡದಿದ್ದಲ್ಲಿ ಸರ್ಕಾರದಿಂದ ಸಿಗುವ ಬಡ್ಡಿ ಸಬ್ಸಿಡಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಅವರು ಹೇಳಿದ್ದಾರೆ.