'ಪೆಟ್ರೋಲ್ ಹಾಗೂ ಡೀಸೆಲ್ ತೆರಿಗೆ ಕಡಿಮೆ ಮಾಡಲ್ಲ' : ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 11: 'ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಇದೆ. ಅದರ ಮೇಲ್ಪಟ್ಟೂ ತೆರಿಗೆ ಕಡಿಮೆ ಮಾಡಬೇಕಾದರೆ ಕೇಂದ್ರ ಸರ್ಕಾರವೇ ಮಾಡಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಈ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅಗ್ಗ
ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲೂ ನಮ್ಮ ರಾಜ್ಯದ ಡೀಸೆಲ್ ಮತ್ತು ಪೆಟ್ರೋಲ್ ದರ ಕಡಿಮೆ ಇದೆ. ಇನ್ನೂ ತೆರಿಗೆ ಕಡಿಮೆ ಮಾಡಬೇಕಾದರೆ ಕೇಂದ್ರ ಸರ್ಕಾರವೇ ಮಾಡಲಿ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರವು ಇತ್ತೀಚೆಗೆ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತ್ತು. ಇದಾದ ಬಳಿಕ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಬೆಲೆ ಇಳಿಕೆಯಾಗಿತ್ತು. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಕರ್ನಾಟಕದಲ್ಲೂ ನಿರೀಕ್ಷೆ ಮೂಡಿತ್ತು.
ಆದರೆ, ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾವು ತೆರಿಗೆ ಕಡಿಮೆ ಮಾಡೋದಕ್ಕೆ ಆಗಲ್ಲ. ಯಾವುದೇ ಕಾರಣಕ್ಕೂ ವ್ಯಾಟ್ ದರ ಇಳಿಸಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರಗಳು ತಮ್ಮ ಜನರ ಕಷ್ಟ ನಷ್ಟಗಳನ್ನು ಗಮನಿಸಿ ಹೆಚ್ಚುವರಿ ತೆರಿಗೆಗಳನ್ನು ಮನ್ನಾ ಮಾಡುವ ಅಧಿಕಾರ ಚಲಾಯಿಸಬಹುದು. ಗೋವಾ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಪೆಟ್ರೋಲ್ ಮೇಲಿನ ವೌಲ್ಯವರ್ಧಿತ ತೆರಿಗೆ (ವ್ಯಾಟ್) ಯನ್ನು ಇಳಿಸಿದೆ.
ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡಿದ ಮೇಲೆ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಹೀಗಾಗಿ ಯಾವಾಗಲೂ ಪೆಟ್ರೋಲ್ ಬೆಲೆ ದೆಹಲಿ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಧಿಕವಾಗಿರುತ್ತದೆ.