ಹ್ಯಾರೀಸ್ ಪುತ್ರನ ಹಲ್ಲೆ ಪ್ರಕರಣ ಬಗ್ಗೆ ಸಿದ್ದರಾಮಯ್ಯರಿಂದ ಟ್ವೀಟ್
ಬೆಂಗಳೂರು, ಫೆಬ್ರವರಿ 18: ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಅವರ ಪುತ್ರ, ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಲಪಾಡ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಆರೋಪಿಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರು ನಿವಾಸಿ ಇತಿಹಾಸಗಾರ ರಾಮಚಂದ್ರ ಗುಹಾ ಅವರು, ಯುಬಿ ಸಿಟಿಯ ಪಬ್ ನಲ್ಲಿ ನಡೆದ ಗಲಾಟೆ ಹಾಗೂ ಹ್ಯಾರೀಸ್ ಪುತ್ರನ ವಿರುದ್ಧ ಕಾನೂನು ಕ್ರಮದ ಬಗ್ಗೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಆರೋಪಿಗಳು ಯಾರೇ ಆಗಿರಲಿ, ಕಾನೂನಿಗೆ ತಲೆಬಾಗಲೇಬೇಕು ಎಂದಿದ್ದಾರೆ.
ಕಾಂಗ್ರೆಸ್ಸಿನಿಂದ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಉಚ್ಚಾಟನೆ
ವಿದ್ವತ್ ಎಂಬ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ನಲಪಾಡ್ ಅವರು ಆರೋಪಿ ನಂಬರ್ 01 ಆಗಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Offenders should be punished to the full extent of law regardless of who they are. No less, no more.@CPBlr will take action as per law and bring the guilty to book. https://t.co/H0Km8zauVz
— Siddaramaiah (@siddaramaiah) February 18, 2018
ಈ ಹಿನ್ನೆಲೆಯಲ್ಲಿ ಮೊಹಮ್ಮದ್ ನಲಪಾಡ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮೊಹಮ್ಮದ್ ಅವರು ಪಾಲ್ಗೊಳ್ಳುವಂತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ನೀಡಿದ ಆದೇಶದಲ್ಲಿ ಹೇಳಲಾಗಿದೆ.
ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರನ ಮೇಲೆ ಹಲ್ಲೆ ಪ್ರಕರಣ
ಡಾಲರ್ಸ್ ಕಾಲೋನಿ ನಿವಾಸಿ, ಉದ್ಯಮಿ ಲೋಕನಾಥ್ ಅವರ ಪುತ್ರ ವಿದ್ವತ್ ಅವರು ಇತ್ತೀಚೆಗೆ ಸಿಂಗಪುರದಲ್ಲಿ ಪದವಿ ಪಡೆದು, ಬೆಂಗಳೂರಿಗೆ ವಾಪಸ್ ಆಗಿದ್ದರು. ಯುಬಿ ಸಿಟಿಯ ಫರ್ಜ್ ಕೆಫೆಯಲ್ಲಿ ಸ್ನೇಹಿತರ ಜತೆ ಇದ್ದ ವಿದ್ವತ್ ಹಾಗೂ ಹ್ಯಾರೀಸ್ ಪುತ್ರ ಮೊಹಮ್ಮದ್ ಮತ್ತು ಸಂಗಡಿಗರಿಗೆ ಜಗಳವಾಗಿದೆ. ಮೊಹಮ್ಮದ್ ಕಡೆಯವರು ವಿದ್ವತ್ ಹಾಗೂ ಅವರ ಸೋದರನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.