ಮಹಾತ್ಮರ ಜಯಂತಿ ಆಗಲೇಬೇಕು : ಕನಕಜಯಂತಿಯಂದು ಸಿದ್ದು
ಇಂದು ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಕೃತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಸಿದ್ದಣ್ಣ ಫಕೀರಪ್ಪ ಜಕಬಾಳ ಅವರಿಗೆ 2016ನೇ ಸಾಲಿನ 'ಕನಕ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು
ಬೆಂಗಳೂರು, ನವೆಂಬರ್, 17: ಜಾತ್ಯಾತೀತ ತತ್ವಗಳನ್ನು ಎತ್ತಿಹಿಡಿಯಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನಕದಾಸ ಮೂರ್ತಿ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪ ನಮನ ಸಲ್ಲಿಸಿದರು.
"ಮಹಾತ್ಮರ, ದಾರ್ಶನಿಕರ ಜಯಂತಿ, ಸರ್ವರ ಜಯಂತಿ ಆಗಬೇಕೆಂಬ ಉದ್ದೇಶದಿಂದಲೇ ರಾಜ್ಯ ಸರ್ಕಾರ ವಿವಿಧ ಜಯಂತಿ ಆಚರಿಸುತ್ತಿದೆ" ಎಂದು ಸಿಎಂ ಹೇಳಿದರು.
"ರಾಜ್ಯ ಸರ್ಕಾರ ತನ್ನ ಜಾತ್ಯಾತೀತ ನಿಲುವಿನ ಕಾರಣದಿಂದಲೇ, ಟಿಪ್ಪು ಜಯಂತಿಯನ್ನೂ ಆಚರಿಸಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
"ಯಾರೇ ಆಗಲಿ, ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿದ್ದರೆ ಅಂತಹವರನ್ನು ವಿರೋಧಿಸಿ ಹಾಗೇ ಸ್ವಾರ್ಥ ಸಾಧನೆಗೆ ಮುಂದಾಗುವವರನ್ನೂ ಬೆಂಬಲಿಸಬೇಡಿ" ಎಂದು ಮುಖ್ಯಮಂತ್ರಿ ಅವರು ಕರೆ ನೀಡಿದರು.
ನಾನು ರಾಜಕೀಯದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಕುರಿತು ರಾಜಿ ಮಾಡಿಕೊಳ್ಳುವುದಿಲ್ಲ ಹಾಗೆಯೇ ಕನಕದಾಸರನ್ನು ಗೌರವಿಸುವುದು ಎಂದರೆ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವುದು ಎಂದರ್ಥ ಎಂದು ಅವರು ಹೇಳಿದರು.
ಎಂ. ಸುರೇಶ್ ಗೆ 'ಕನಕ ಯುವ ಪುರಸ್ಕಾರ'
ದಾಸ ಪರಂಪರೆಯ ಅಧ್ಯಯನದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಡಾ.ಎಂ. ಸುರೇಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕನಕ ಯುವ ಪುರಸ್ಕಾರ' ಪ್ರಶಸ್ತಿ ನೀಡಿ ಗೌರವಿಸಿದರು.
ವಿದ್ಯಾರ್ಥಿಗಳಿಗೆ ಬಹುಮಾನ
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕನಕ ಸಾಹಿತ್ಯ ಲೋಕ' ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಸಿದ್ದಣ್ಣ ಫಕೀರಪ್ಪ ಅವರಿಗೆ 'ಕನಕ ಶ್ರೀ' ಪ್ರಶಸ್ತಿ
ದಾಸ ಶ್ರೇಷ್ಠ ಕನಕದಾಸರ ಕೃತಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಸಿದ್ಧಣ್ಣ ಫಕೀರಪ್ಪ ಜಕಬಾಳ ಅವರಿಗೆ 2016ನೇ ಸಾಲಿನ 'ಕನಕ ಶ್ರೀ' ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದಾನ ಮಾಡಿದರು.
'ಸಂತ ಕವಿ ಕನಕದಾಸ' ಕೃತಿ ಬಿಡುಗಡೆ
ಕನಕ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ 'ಸಂತಕವಿ ಕನಕದಾಸರು' ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು.
ಕನಕ ದಾಸರ ಕೃತಿಗಳ ಗಾಯನ
ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಲಾಗಿದ್ದ ಕನಕ ಜಯಂತಿ ಆರಂಭಕ್ಕೂ ಮುನ್ನ ಗಾಯಕರು ಕನಕದಾಸರ ಕೃತಿಗಳ ಹಲವು ಗೀತೆಗಳನ್ನು ಹಾಡಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರಿ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.