ಬಂದ್ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಖಡಕ್ ಉತ್ತರ
ಬೆಂಗಳೂರು, ಜನವರಿ 22: ಜನವರಿ 25ರಂದು ಮಹದಾಯಿ ವಿಚಾರವಾಗಿ ಕನ್ನಡ ಪರಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ಗೆ ಸರ್ಕಾರದ ಬೆಂಬಲ ಇದೆ ಎಂದು ಯಡಿಯೂರಪ್ಪ ಹಾಗೂ ಆರ್.ಅಶೋಕ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಸರ್ಕಾರದ ವಿರುದ್ಧ ಆರೋಪ ಮಾಡಲು ವಿಷಯಗಳಿಲ್ಲ ಹಾಗಾಗಿ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಜ.25ರ ರಾಜ್ಯ ಬಂದ್ ಹಿಂದೆ ಸಿಎಂ ನೇರ ಕೈವಾಡ: ಬಿಎಸ್ವೈ
ಯಾವುದೇ ಬಂದ್ ನಡೆದರೆ ನಷ್ಟವಾಗುವುದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ, ಹೀಗಿರುವಾಗ ಸರ್ಕಾರ ಬಂದ್ಗೆ ಸಹಕರಿಸಲು ಸಾಧ್ಯವೇ ಎಂದು ಅವರು ಮರು ಪ್ರಶ್ನಿಸಿದ್ದಾರೆ. ಬಂದ್ಗೆ ಸಹಕಾರ ಮಾಡುವ ಅವಶ್ಯಕತೆ ಸರ್ಕಾರಕ್ಕಿಲ್ಲ, ಬಿಜೆಪಿ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಡಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಬಿಜೆಪಿಯ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಬರುವ ದಿನವೇ (ಜನವರಿ 25) ಬಂದ್ಗೆ ಕರೆ ನೀಡಲಾಗಿದ್ದು, ಇದು ಸರ್ಕಾರದ ಪ್ರಯೋಜಿತ ಬಂದ್ ಎಂದು ಆರ್.ಅಶೋಕ್ ಮತ್ತು ಯಡಿಯೂರಪ್ಪ ಅವರು ಟೀಕಿಸಿದ್ದರು.