ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ ಚಿತ್ರ, ವರದಿ
ಬೆಂಗಳೂರು, ಆ.5 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ.
ಸಿಎಂ ಬೆಂಗಳೂರು ರೌಂಡ್ಸ್ : ಪೀಣ್ಯ ಅಭಿವೃದ್ಧಿಗೆ 100 ಕೋಟಿ
ಶನಿವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಿಂದ ಬಿಎಂಟಿಸಿಯ ವೋಲ್ವೊ ಬಸ್ಸಿನಲ್ಲಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಆರಂಭಿಸಿದರು. ಹಲವು ಸಚಿವರು, ಅಧಿಕಾರಿಗಳು, ಬಿಬಿಎಂಪಿಯ ಅಧಿಕಾರಿಗಳು ಸಿದ್ದರಾಮಯ್ಯ ಜೊತೆ ಇದ್ದಾರೆ.
ಬಿಬಿಎಂಪಿ ವತಿಯಿಂದ ಚರ್ಚ್ ಸ್ಟ್ರೀಟ್ ನಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಮುಖ್ಯಮಂತ್ರಿಗಳು ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಬೆಂಗಳೂರು ನಗರ ಪ್ರದಕ್ಷಿಣೆ ಮುಖ್ಯಾಂಶಗಳು
ಆನೆಪಾಳ್ಯದಲ್ಲಿ ನಡೆಯುತ್ತಿರುವ ಕೊಳಚೆ ನೀರು ಹರಿಯುವ ಚರಂಡಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಸಚಿವರಾದ ರಾಮಲಿಂಗಾ ರೆಡ್ಡಿ, ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮುಂತಾದವರು ಸಿದ್ದರಾಮಯ್ಯ ಜೊತೆಗಿದ್ದಾರೆ.
ಆ.16ರಂದು 125 ಇಂದಿರಾ ಕ್ಯಾಂಟೀನ್ ಉದ್ಘಾಟನೆ
'ಬೆಂಗಳೂರು ನಗರದ 125 ವಾರ್ಡ್ ಗಳಲ್ಲಿ ಆಗಸ್ಟ್ 16 ರಂದು ಇಂದಿರಾ ಕ್ಯಾಂಟೀನ್ ಗಳಿಗೆ ಚಾಲನೆ ನೀಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 'ಪ್ರತಿ ವಾರ್ಡಿಗೊಂದು ಕ್ಯಾಂಟೀನ್ ಆರಂಭ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಈ ಪೈಕಿ 125 ಕ್ಯಾಂಟೀನ್ ಗಳು ಆ.16 ರಂದು ಉದ್ಘಾಟನೆಯಾಗಲಿವೆ. ಉಳಿದವುಗಳು ಅಕ್ಟೋಬರ್ 2 ರೊಳಗೆ ಕಾರ್ಯಾರಂಭ ಮಾಡಲಿವೆ' ಎಂದರು.
ಕಾರ್ಮಿಕರ ಕಷ್ಟ ವಿಚಾರಿಸಿದ ಸಿಎಂ
ಚರ್ಚ್ ಸ್ಟ್ರೀಟ್ ನಲ್ಲಿ ನಡೆಯುತ್ತಿರುವ ಟೆಂಡರ್ ಶ್ಯೂರ್ ಕಾಮಗಾರಿಯನ್ನು ವೀಕ್ಷಣೆ ಮಾಡಲು ತೆರಳಿದ ಸಿದ್ದರಾಮಯ್ಯ ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರ ಕಷ್ಟ ವಿಚಾರಿಸಿದರು. ವೆಂಕಟಮ್ಮ ಮತ್ತು ಶಿವಮ್ಮ ತಾವು ಬಳ್ಳಾರಿ ಮತ್ತು ರಾಯಚೂರಿನಿಂದ ಕೆಲಸಕ್ಕೆ ಬಂದಿದ್ದೇವೆ. ಬಸ್ ಸ್ಟಾಂಡ್ ನಲ್ಲಿ ವಾಸವಾಗಿದ್ದು, ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ತಮಗೆ ಇಲ್ಲವಾಗಿದೆ ಎಂದರು ಅಳಲು ತೋಡಿಕೊಂಡರು.
ಎಂ.ಜಿ,ರಸ್ತೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಚರ್ಚ್ ಸ್ಟ್ರೀಟ್ ವೀಕ್ಷಣೆ ಮಾಡಿದ ಬಳಿಕ ಬ್ರಿಗೇಡ್ ರಸ್ತೆಗೆ ಆಗಮಿಸಿದ ಸಿದ್ದರಾಮಯ್ಯ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮತ್ತು ಶಾಂತಿ ನಗರ ಶಾಸಕ ಹ್ಯಾರೀಸ್ ಅವರ ಜೊತೆ ಮಾತನಾಡುತ್ತ, 'ಬ್ರಿಗೇಡ್ ಮತ್ತು ಎಂ.ಜಿ.ರಸ್ತೆ ಯುವಕರನ್ನು ಸೆಳೆಯುವ ಸ್ಥಳ ಎಂದು ರಾಮಕೃಷ್ಣ ಹೆಗಡೆ ಹೇಳುತ್ತಿದ್ದರು. ಆದರೆ, ನಾನೆಂದು ಬಂದಿರಲಿಲ್ಲ' ಎಂದರು.
ಅಕ್ಟೋಬರ್ ಗೆ ಕಾಮಗಾರಿ ಮುಸಿಗಬೇಕು
ಚರ್ಚ್ ಸ್ಟ್ರೀಟ್ ನ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ ಮಾಡಿದ ಸಿದ್ದರಾಮಯ್ಯ ಅಕ್ಟೋಬರ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.