ಬಡವರ ಬಂಧು ಯೋಜನೆ: ಬೀದಿಬದಿ ವರ್ತಕರೊಂದಿಗೆ ಸಿಎಂ ವಿಡಿಯೋ ಸಂಭಾಷಣೆ
ಬೆಂಗಳೂರು, ಸೆಪ್ಟೆಂಬರ್ 4: ಮಧ್ಯವರ್ತಿಗಳು ಹಾಗೂ ಮೀಟರ್ ಬಡ್ಡಿ ದಂಧೆಯನ್ನು ತಪ್ಪಿಸಲು ಸರ್ಕಾರವು ಬಡವರ ಬಂಧು ಎನ್ನುವ ಯೋಜನೆಯನ್ನು ಜಾರಿಗೊಳಿಸುತ್ತಿದೆ ಇದರ ಕುರಿತು ಬೀದಿಬದಿ ವ್ಯಾಪಾರಿಗಳೊಂದಿಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ವಿಡಿಯೋ ಸಂಭಾಷಣೆ ನಡೆಸಿದರು.
ಈ ಯೋಜನೆ ಜಾರಿ ಕುರಿತು ಬೀದಿಬದಿ ವ್ಯಾಪಾರಿಗಳ ಜತೆ ಸಭೆ ನಡೆಸಲು ಸಚಿವ ಬಂಡೆಪ್ಪ ಕಾಂಶೆಂಪೂರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ತೆರಳಿದ್ದರು, ಅಲ್ಲಿನ ವರ್ತಕರ ಜತೆಗೆ ಮಾತುಕತೆ ನಡೆಸಿದರು.
ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!
ಅದೇ ಸಮಯದಲ್ಲಿ ಸಿಎಂ ಕೂಡ ವಿಡಿಯೋ ಕಾಂನ್ಫೆರೆನ್ಸ್ ಮೂಲಕ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸಿ ಅವರ ಕಷ್ಟಗಳಿಗೆ ಸ್ಪಂದಿಸಿದರು. ಮೀಟರ್ ಬಡ್ಡಿ ದಂಧೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದಾಗಿ ತಾವು ಅನುಭವಿಸುತ್ತಿರುವ ಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಮೀಟರ್ ಬಡ್ಡಿ ದಂಧೆ ತಪ್ಪಿಸಲು ಮೊಬೈಲ್ ಅಪ್ಲಿಕೇಷನ್ ಮೂಲಕ ಧನ ಸಹಾಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ, ಜತೆಗೆ ಸರ್ಕಾರವು ದಿನದ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ. ಇದರ ಉಪಯೋಗವನ್ನು ವ್ಯಾಪಾರಿಗಳು ಪಡೆದುಕೊಳ್ಳಬೇಕು ಎಂದರು.
ದಿನದ ಮಟ್ಟಿಗೆ ಸಾಲ ಯೋಜನೆ: ವರ್ತಕರೊಂದಿಗೆ ಸರ್ಕಾರದ ಚರ್ಚೆ
ಕೆಲವೇ ದಿನಗಳಲ್ಲಿ 'ಬಡವರ ಬಂಧು ಯೋಜನೆ'ಗೆ ಚಾಲನೆ ನೀಡಲಿದ್ದೇವೆ. ಈ ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ತರಲಿದ್ದೇವೆ. ಈ ಯೋಜನೆ ಕಾರ್ಯರೂಪಕ್ಕೆ ತರಲು ಬ್ಯಾಂಕ್ ಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಕೊಡುತ್ತೇವೆ.