ಕಾಲೇಜಿನಲ್ಲಿ ದಡ್ಡನಾಗಿದ್ದೆ, ಕೊನೆ ಬೆಂಚ್ನಲ್ಲಿ ಕೂರುತ್ತಿದ್ದೆ: ಎಚ್ಡಿಕೆ ಮೆಲುಕು
ಬೆಂಗಳೂರು, ಜೂನ್ 5: ಕಾಲೇಜಿನಲ್ಲಿ ನಾನೊಬ್ಬ ದಡ್ಡನಾಗಿದ್ದೆ, ಮುಂದಿನ ಬೆಂಚಿನಲ್ಲಿ ಕುಳಿತರೆ ಉಪನ್ಯಾಸಕರು ಪ್ರಶ್ನೆ ಕೇಳುತ್ತಾರೆ ಎಂದು ಹೆದರಿ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆ ಹೀಗೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು ಜಯನಗರ ನ್ಯಾಷನಲ್ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
12 ವರ್ಷಗಳ ಬಳಿಕ ಮತ್ತೆ ವಿಧಾನಸಭೆಯಲ್ಲಿ ಮುಂದಿನ ಸೀಟಿನಲ್ಲಿ ಕುಳಿತು ವಿರೋಧ ಪಕ್ಷದವರಿಗೆ ಉತ್ತರಿಸಬೇಕಾದ ಕುಮಾರಸ್ವಾಮಿ ತಾವು ಕಲಿತ ಹಳೇ ಕಾಲೇಜಿಗೆ ಭೇಟಿ ನೀಡಿದ ವೇಳೆ ತಮ್ಮ ಹಳೆಯ ದಿನಗಳನ್ನು ಈ ರೀತಿ ಮೆಲುಕು ಹಾಕಿದರು.
ವಿದ್ಯಾಭ್ಯಾಸ ಮಾಡಿದ ಜಯನಗರ ನ್ಯಾಷನಲ್ ಕಾಲೇಜಿಗೆ ಕುಮಾರಸ್ವಾಮಿ ಭೇಟಿ
1978 ರಿಂದ 1980ರವರೆಗೆ ನ್ಯಾಷನಲ್ ಕಾಲೇಜಿನಲ್ಲಿ ಕಲಿತ ದಿನಗಳನ್ನು ನೆನೆಸಿಕೊಂಡ ಕುಮಾರಸ್ವಾಮಿ, ನಾನು ಡಾ. ರಾಜ್ಕುಮಾರ್ ಅಭಿಮಾನಿಯಾಗಿದ್ದೆ ಆ ದಿನಗಳಲ್ಲಿ ಅವರ ಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ನಾನು ವಿದ್ಯಾರ್ಥಿಯಾಗಿದ್ದರೂ ಕೂಡ ನಾನೊಬ್ಬ ಉತ್ತಮ ವಿದ್ಯಾರ್ಥಿಯಾಗಿದ್ದರೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಆದರೆ ಆ ರೀತಿ ಸಾಧಿಸಲು ಸಾಧ್ಯವಾಗಿಲ್ಲ ಎಂದರು.
ನಮ್ಮ ತಂದೆ ನನ್ನನ್ನ ಯಾವಾಗಲೂ ನೀನೊಬ್ಬ ಅಯೋಗ್ಯ ಎಂದು ನಿಂದಿಸುತ್ತಿದ್ದರು, ಅವರಿಗೆ ಇಷ್ಟವಾಗುವ ಯಾವ ಕೆಲಸವನ್ನೂ ನಾನು ಮಾಡಿರಲಿಲ್ಲ, ಆದರೆ ಅದು ಹೇಗೋ ರಾಜಕಾರಣವನ್ನು ಪ್ರವೇಶಿಸಿ ಸಂಸದನಾಗುವಲ್ಲಿ ಸಾಕಷ್ಟು ಪರಿಶ್ರಮ ಪಟ್ಟೆ, ಕೊನೆಗೆ ನಾನೊಬ್ಬ ಯಶಸ್ವಿರಾಜಕಾರಣಿಯಾದೆ ನಾನೊಬ್ಬ ಅದೃಷ್ಟ ರಾಜಕಾರಣಿ ನನಗೆ ಅನಿಸುತ್ತದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು.
ನಾಣು ಕಾಲೇಜು ದಿನಗಳಲ್ಲಿ ಬೇಜವಾಬ್ದಾರಿ ವಿದ್ಯಾರ್ಥಿಯಾಗಿದ್ದೆ, ಈಗಿನ ವಿದ್ಯಾರ್ಥಿಗಳು ಆ ರೀತಿಯಾಗಬಾರದು, ಉತ್ತಮ ಶಿಕ್ಷಣ ಪಡೆದು ಸರಿದಾರಿಯಲ್ಲಿ ನಡೆಯಬೇಕು ಎಂದು ಮನವಿ ಮಾಡಿದ ಅವರು, ತಮ್ಮನ್ನು ಯಾರು ಬೇಕಾದರೂ ವಿಧಾನಸೌಧದಲ್ಲಿ ನೇರವಾಗಿ ಭೇಟಿ ಮಾಡಬಹುದು, ಯಾರೂ ಕೂಡ ಮುಂಚಿತವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಅಥವಾ ಶಿಫಾರಸ್ಸು ಪತ್ರ ಬೇಕಿಲ್ಲ ಎಂದರು.