ಕೆಎಟಿ ಪೀಠಕ್ಕೆ ಆಗ್ರಹಿಸಿ ಸಿಎಂ ಪ್ರತಿಕೃತಿ ದಹನ
ಬೆಳಗಾವಿ, ನ. 19: ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ಪೀಠವನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಆಗ್ರಹಿಸಿ ವಕೀಲರು ಬುಧವಾರ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿದರು.
ಪೀಠಕ್ಕಾಗಿ ಆಗ್ರಹಿಸಿ ವಕೀಲರು ಕಳೆದ ನಾಲ್ಕು ದಿನಗಳಿಂದ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದಾರೆ. ಇದೇ ಬೇಡಿಕೆ ಈಡೇರಿಸಲು ಆಗ್ರಹಿಸಿ ವಕೀಲರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು.
ಬೆಳಗಾವಿಯು ಅತ್ಯಂತ ದೊಡ್ಡ ಜಿಲ್ಲೆಯಾಗಿದ್ದು, ಮೂರು ಕಂದಾಯ ಉಪ ವಿಭಾಗಗಳಿವೆ. ಎರಡು ಶೈಕ್ಷಣಿಕ ಜಿಲ್ಲೆಗಳು ಹಾಗೂ ಎಂಟು ಜಿಲ್ಲಾ ಮಟ್ಟದ ನ್ಯಾಯಾಲಯಗಳಿವೆ. 50 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರೂ ಇದ್ದಾರೆ. ಆದ್ದರಿಂದ ಕೆಎಟಿ ಸ್ಥಾಪನೆಗೆ ಅರ್ಹವಾಗಿದೆ ಎಂದು ವಕೀಲರು ಸಮರ್ಥಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ನ್ಯಾಯಾಲಯ ಕಾರ್ಯಕಲಾಪ ಬಹಿಷ್ಕರಿಸಿ ಪ್ರತಿಭಟಿಸುವುದಾಗಿ ವಕೀಲರು ಸ್ಪಷ್ಟಪಡಿಸಿದ್ದಾರೆ.
ಮೊದಲೂ ಪ್ರತಿಭಟಿಸಿದ್ದರು: ಇದೇ ಬೇಡಿಕೆ ಮಂಡಿಸಿ ಇದೇ ವರ್ಷದ ಜುಲೈ ತಿಂಗಳಲ್ಲಿ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮನೆ ಎದುರು ನ್ಯಾಯವಾದಿಗಳು ಪ್ರತಿಭಟಿಸಿದ್ದರು. ಅವರ ಬೇಡಿಕೆಯನ್ನು ಶೀಘ್ರ ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ಪಡೆದಿದ್ದರು.