ದುಡ್ಡು ಸಿಗ್ತಿಲ್ಲ, ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು?
ಬೆಂಗಳೂರು, ನವೆಂಬರ್ 16: ಬುಧವಾರ ಬೆಳಗ್ಗೆ ಆಫೀಸಿಗೆ ಬರುವಾಗ ದಾರಿಯುದ್ದಕ್ಕೂ ಎಟಿಎಂ ಕೇಂದ್ರಗಳನ್ನು ನೋಡುತ್ತಾ ಬಂದೆ. ಹಲವು ಕಡೆ ಖಾಲಿ-ಖಾಲಿ. ಮತ್ತೆ ಕೆಲವು ಕಡೆ ಅರ್ಧ ಮುಚ್ಚಿದ್ದವು. ಏಳೆಂಟು ಕಿಲೋಮೀಟರ್ ದೂರಕ್ಕೆ ಬಂದ ನಂತರವೂ ಬಾಗಿಲು ತೆಗೆದು, ಅದರ ಎದುರು ರಾಶಿರಾಶಿ ಜನ ಕಂಡಿದ್ದು ಮಾತ್ರ ಒಂದೇ ಕಡೆ.
ಬಹುತೇಕ ಎಟಿಎಂಗಳು ಬಾಗಿಲು ಮುಚ್ಚಿರುವುದರಿಂದ ಬ್ಯಾಂಕ್ ಗಳ ಎದುರೇ ಜನಸಂದಣಿ. ಬಾಗಿಲು ತೆರೆಯುವುದಕ್ಕೆ ಮುಂಚೆಯೇ ಜನರ ಸರತಿ ಸಾಲು. ಇಡೀ ದೇಶಕ್ಕೆ ಒಳ್ಳೆಯದಾಗುವಾಗ ಕೆಲವು ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕು ಅನ್ನೋ ಮಾತು ಕಿವಿಗೆ ಪದೇ ಪದೇ ತಾಕುತ್ತಿದೆ. ಆದರೆ ಎಷ್ಟು ದಿನ ಹೀಗೆ ಅಂತ ಗೊತ್ತಾಗಬೇಕಲ್ಲವಾ ಎಂಬುದು ಹಲವರ ಪ್ರಶ್ನೆ.[25 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು]
ಮಗಳದೋ-ಮಗನದೋ ಮದುವೆ ಮಾಡಬೇಕು ಅಂತ ಸಾಲ-ಸೋಲ ತಂದು ಹಣ ಇಟ್ಟುಕೊಂಡಿದ್ದವರು. ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ಕಳಿಸುವ ಸಲುವಾಗಿ ಹಣ ಹೊಂದಿಸಿಕೊಂಡಿದ್ದವರು. ತಮ್ಮದೊಂದು ಸ್ವಂತ ಸೂರು ಕಟ್ಟಿಕೊಳ್ಳುತ್ತಿರುವವರು. ಹತ್ತು-ಹನ್ನೆರಡು ದಿನದ ಹಿಂದಷ್ಟೇ ಸಾಲ ಪಡೆದು ತರಕಾರಿ ಅಥವಾ ಹಣ್ಣಿನ ಗಾಡಿ ವ್ಯವಹಾರ ಆರಂಭಿಸಿದವರು- ಇಂಥವರ ಗತಿ ಏನು?
ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದಿಂದ ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜಸ್ ಅಂತ ಹಾಕುತ್ತಿದ್ದರು. ಗ್ರಾಹಕರು ತಮ್ಮ ಹಣವನ್ನು ಬ್ಯಾಂಕ್ ಗೆ ಕಟ್ಟುವಾಗ ಅದನ್ನು ಭರಿಸಬೇಕಿತ್ತು. ಅದನ್ನು ತೆಗೆದುಹಾಕಿದ್ದಾರಾ ಎಂಬುದು ಗೊತ್ತಾಗಬೇಕಿದೆ. ಇನ್ನು ಕೆಲವು ಬ್ಯಾಂಕ್ ಗಳಲ್ಲಿ ಹಣದ ಕೊರತೆಯ ಕಾರಣಕ್ಕೋ ಸಿಬ್ಬಂದಿ ಕೊರತೆ ಕಾರಣಕ್ಕೋ ಗ್ರಾಹಕರ ಒತ್ತಡವೋ ಸರಕಾರವೇ ಘೋಷಿಸುತ್ತಿರುವ ನಿಯಮಗಳ ಪಾಲನೆ ಆಗುತ್ತಿಲ್ಲ.[ಹಣ ವಿನಿಮಯಕ್ಕೆ ಗುರುತಿನ ಚೀಟಿ ತೋರಿಸಿದರೆ ಸಾಕು]
ಎಟಿಎಂಗಳಲ್ಲಿ ತುಂಬುತ್ತಿರುವ ಮೊತ್ತ ಕೆಲ ಗಂಟೆಗಳಲ್ಲಿ ಖಾಲಿಯಾಗುತ್ತಿವೆ, ಹಲವು ಎಟಿಎಂಗಳು ಬಾಗಿಲೇ ತೆಗೆಯುತ್ತಿಲ್ಲ, ಸಂಚಾರಿ ಎಟಿಎಂಗಳು ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿವೆ, ದಿನದಿನಕ್ಕೂ ಬದಲಾಗುತ್ತಿರುವ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ವಾಟ್ಸ್ ಅಪ್-ಫೇಸ್ ಬುಕ್ ಗಳಲ್ಲಿ ದಿನಕ್ಕೊಂದು ವದಂತಿ ಹಬ್ಬಿಸಿ ಹೆದರಿಸುತ್ತಿದ್ದಾರೆ.
ಇಲ್ಲಿ ಹಾಕಿರುವುದಕ್ಕಿಂತ ನೀವು ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿದ್ದರೆ ತಿಳಿಸಬಹುದು. ಅಥವಾ ನಮಗೆ ಸಮಸ್ಯೆಯೇ ಆಗಿಲ್ಲ, ಅದಕ್ಕೆ ಈ ಮಾರ್ಗ ಅನುಸರಿಸಿ ಎಂದು ಸಲಹೆ ನೀಡುವವರಿಗೂ ಸ್ವಾಗತ. ಒನ್ ಇಂಡಿಯಾದ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ.