ಒಂದೇ ವೇದಿಕೆಯಲ್ಲಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಆಲಿಸಿ!
ಬೆಂಗಳೂರಿನ ಸಂಗೀತ ಪ್ರೇಮಿಗಳಿಗೆ ಪ್ರಪ್ರಥಮ ಬಾರಿಗೆ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ಗುರು-ಶಿಷ್ಯರೊಡಗೂಡಿ ಅದೂ ಒಂದೇ ವೇದಿಕೆಯಲ್ಲಿ ನಡೆಸಿಕೊಡಲಿದ್ದಾರೆ.
ಬೆಂಗಳೂರು, ಜೂನ್ 01: ಬೆಂಗಳೂರಿನ ಸಂಗೀತ ಪ್ರೇಮಿಗಳಿಗೆ ಪ್ರಪ್ರಥಮ ಬಾರಿಗೆ ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ಒಂದೇ ವೇದಿಕೆಯಲ್ಲಿ ಆಲಿಸುವ ಅವಕಾಶ ಒದಗಿ ಬಂದಿದೆ. ಗುರು-ಶಿಷ್ಯರೊಡಗೂಡಿ ಸಂಗೀತ ಕಚೇರಿ ನಡೆಸಿಕೊಡಲಿದ್ದಾರೆ.
ಸುನಾದ ಆರ್ಟ್ಸ್ ಫೌಂಡೇಶನ್ ಹಾಗೂ ಸಮನ್ವಯ ಕಲಾಕೇಂದ್ರ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಇದೇ ಜೂನ್ 3ರಂದು ಶನಿವಾರ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಬನಶಂಕರಿ 2ನೇ ಹಂತದಲ್ಲಿರುವ ಅವರ್ ಸ್ಕೂಲ್ ಆವರಣದಲ್ಲಿ ನಡೆಯಲಿದೆ.
ನಿರಂತರವಾಗಿ ಹನ್ನೆರಡು ಗಂಟೆಗಳ ಕಾಲ ಎರಡೂ ಪ್ರಕಾರಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲಾಗಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರುಗಳಾದ ಕರ್ನಾಟಕ ಕಲಾಶ್ರೀ ತಿರುಮಲೆ ಶ್ರೀನಿವಾಸ್, ಪಂಡಿತ್ ಡಾ. ನಾಗರಾಜರಾವ್ ಹವಾಲ್ದಾರ್, ಗಾನಕಲಾಶ್ರೀ ಆನೂರು ಅನಂತಕೃಷ್ಣ ಶರ್ಮ, ವಿದುಷಿ ಗೀತಾ ರಮಾನಂದ್, ವಿದ್ವಾನ್ ವಿ.ಗೋಪಾಲ್, ವಿದ್ವಾನ್ ಆನೂರು ದತ್ತಾತ್ರೇಯ ಶರ್ಮ, ಪಂಡಿತ್ ಪರಮೇಶ್ವರ ಹೆಗಡೆ, ಪಂಡಿತ್ ರವೀಂದ್ರ ಯಾವಗಲ್, ಸಂಗೀತ ಕಲಾರತ್ನ ಎ.ವಿ.ಆನಂದ್, ಕೌಶಿಕ್ ಐತಾಳ್, ವಿದ್ವಾನ್ ಎಸ್.ಶಂಕರ್, ವಿದುಷಿ ಚಾರುಲತಾ ರಾಮಾನುಜಂ, ಮುಂತಾದ ನಲವತ್ತಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.