ಋಷಿ-ಮುನಿಗಳ ಕಟ್ಟುಪಾಡು, ಸಂಸ್ಕೃತಿ ರಕ್ಷಣೆ ಹೊಣೆ ನಮ್ಮ ಮೇಲಿದೆ: ರವಿ ಸುಬ್ರಹ್ಮಣ್ಯ
ಬೆಂಗಳೂರು, ಡಿಸೆಂಬರ್ 8: ಸಂಸ್ಕೃತಿಯಿಂದ ಭಾರತವನ್ನು ಗುರುತಿಸಲಾಗುತ್ತಿದ್ದು, ಋಷಿ, ಮುನಿಗಳ ಆಶೀರ್ವಾದದಿಂದ ರೂಪುಗೊಂಡಿರುವ ಕೆಲವು ಕಟ್ಟು ಪಾಡುಗಳು, ಸಂಪ್ರದಾಯಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟರು.
ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಹಾಗೂ ರಚನಾ ಫೌಂಡೇಶನ್ ಟ್ರಸ್ಟ್ ಜೊತೆಗೂಡಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಪಥ, ಸಂಸ್ಕೃತಿ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗೆ ಮುಖಮಾಡಿ ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಯವಿತ್ತು ಆದರೆ ಇಂತಹ ಕಾರ್ಯಕ್ರಮಗಳಿಂದ ನಮ್ಮ ಸಂಸ್ಕೃತಿ ಉಳಿಯುತ್ತಿದೆ, ಮುನ್ನಡೆದುಕೊಂಡು ಹೋಗುತ್ತಿದೆ ಎನ್ನುವುದು ತಿಳಿದು ತುಂಬಾ ಸಂತೋಷವಾಗುತ್ತದೆ ಎಂದರು.
ಯಾವ ವಿದ್ಯಾರ್ಥಿಗಳು ಗಾಯತ್ರಿ ಮಂತ್ರವನ್ನು ಶ್ರದ್ಧೆ ಭಕ್ತಿಗಳಿಂದ ಪಠಣ ಮಾಡುತ್ತಾರೋ ಅಂಥವರ ಜ್ಞಾನ ವೃದ್ಧಿಯಾಗುತ್ತದೆ, ಅನಾರೋಗ್ಯ ದೂರವಾಗುತ್ತದೆ, ಎಷ್ಟು ಬಾರಿ ಗಾಯತ್ರಿ ಮಂತ್ರ ಉಚ್ಛಾರಣೆ ಮಾಡಲು ಸಾಧ್ಯವಾಗುತ್ತದೆ ಅಷ್ಟು ಬಾರಿ ಪಠಣ ಮಾಡಿ ಎಂದು ಸಲಹೆ ನೀಡಿದರು.
ಪ್ರತಿಯೊಂದು ಮಕ್ಕಳು ಭಗವದ್ಗೀತೆಯ ಎಲ್ಲಾ 18 ಅಧ್ಯಾಯಗಳನ್ನು ಪಠಣ ಮಾಡಬೇಕು, ರಾಮಾಯಣ, ಮಹಾಭಾರತ, ವೇದ, ಉಪನಿಷತ್ಗಳನ್ನು ಮನನ ಮಾಡಿಕೊಂಡು ಅದರ ಅರ್ಥ ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕೇಂದ್ರ ಸಚಿವ ದಿವಂಗತ ಅನಂತ ಕುಮಾರು ಅವರು ಕೂಡ ನಿತ್ಯ ಗೀತಾ ಪಠಣ ಮಾಡುತ್ತಿದ್ದರು, ಜೀವನದಲ್ಲಿ ಅಳವಡಿಸಿಕೊಂಡಿದ್ದರು ಅದು ಕಷ್ಟದ ಸಂದರ್ಭದಲ್ಲಿ ನಮ್ಮಗೆ ಅದರಿಂದ ಹೊರ ಬರಲು ಸಹಾಯ ಮಾಡುತ್ತದೆ ಎಂದು ಅನಂತ ಕುಮಾರ್ ಅವರನ್ನು ಸ್ಮರಿಸಿದರು.
ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ರಚನಾ ಫಂಡೇಶನ್ ಪ್ರೇರಣಾ ತರಗತಿ ಕುರಿತು ಮಾಹಿತಿ: ಚಂದ್ರಶೇಖರ ಉಣ್ಣಿಮನಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ರಚನಾ ಫೌಂಡೇಶನ್ ಟ್ರಸ್ಟ್ ಬಸವನಗುಡಿಯಲ್ಲಿರುವ ಶಾಲಾ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿದೆ. ಬಸವನಗುಡಿಯ 20 ಶಾಲೆಗಳಲ್ಲಿ 6-8 ನೇ ತರಗತಿ ಮಕ್ಕಳಿಗೆ ವಾರಕ್ಕೊಮ್ಮೆ ಕಥೆಯ ಮೂಲಕ ಪ್ರೇರಣೆ ನೀಡಲಾಗುತ್ತದೆ.
ಜೀವನ ಕೌಶಲ್ಯ, ನಾಟಕ, ಸಂಸ್ಕೃತ ಶ್ಲೋಕಗಳು, ಭಗವದ್ಗೀತೆ, ರಾಮಾಯಣ, ಮಹಾಭಾರತ, ವಚನ, ಟಿಪ್ಸ್ಗಳನ್ನು ನೀಡಲಾಗುತ್ತದೆ. ಒಟ್ಟು 1535 ವಿದ್ಯಾರ್ಥಿಗಳಿಗೆ ಕಳೆದ 6 ತಿಂಗಳಿಂದ ತರಬೇತಿ ನೀಡುತ್ತಿದೆ.
ವೇದಿಕೆ ಮೇಲೆ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಆರಾಧನಾ ಫೌಂಡೇಶನ್ ಅಧ್ಯಕ್ಷ ಕೇಸರಿ ಉಪಸ್ಥಿತರಿದ್ದರು.