ಬಣ್ಣದ ಚಿತ್ರಗಳ ಸಂತೆಯಲ್ಲಿ ಮಿಂದೆದ್ದ ಉದ್ಯಾನ ನಗರಿ
ಬೆಂಗಳೂರು, 07: ಐಟಿ ಸಿಟಿ ಜನರನ್ನು ಬಣ್ಣಗಳ ಲೋಕದಿಂದ ಮಂತ್ರಮುಗ್ಧಗೊಳಿಸಲು ಮತ್ತೆ ಬಂದಿದೆ ಚಿತ್ರಸಂತೆ.
ಪ್ರತಿ ವರ್ಷದಂತೆ ಈ ಬಾರಿ ಕೂಡ ಹೊಸ ವೈವಿಧ್ಯಮಯ ಅನುಭವ ನೀಡುತ್ತಿರುವ ಚಿತ್ರಗಳ ಸಂತೆ ಕಲಾಪ್ರಿಯರನ್ನು ಆಕರ್ಷಿಸುತ್ತಿದೆ. ಈ ಬಾರಿ ಪರಿಸರ ಸಂದೇಶ ಹಾಗೂ ಕರ್ನಾಟಕದ ಕಲಾ ಬೆಳವಣಿಗೆಗಳ ಮಾಹಿತಿ ಹೊತ್ತು ಬಂದಿದೆ.
ಸಂತೆಯ ಪರಿಕಲ್ಪನೆ ಬಹಳ ಪ್ರಾಚೀನವಾದದ್ದು , ಬಹಳ ಹಿಂದಿನಿಂದಲೂ ಪ್ರತಿ ವಾರಕ್ಕೊಮ್ಮೆ ಹಳ್ಳಿಗಳಲ್ಲಿ ಸಂತೆ ನಡೆಯುವುದುಂಟು, ರೈತರು ಬೆಳೆದ ತರಕಾರಿಗಳನ್ನೂ, ಬೇರೆ ಕಡೆಯಿಂದ ತಂದ, ನಿತ್ಯ ಬಳಕೆಯ ವಸ್ತುಗಳನ್ನೂ ಪೂರೈಸುವ ನಿಟ್ಟಿನಲ್ಲಿ ಈ ಸಂತೆಗಳ ಪಾತ್ರ ದೊಡ್ಡದು.
In Pics: ಬೆಂಗಳೂರಿಗರನ್ನು ಮಂತ್ರಮುಗ್ಧಗೊಳಿಸಿದ ಚಿತ್ರಸಂತೆ
ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ್ದ 15ನೇ ಚಿತ್ರಸಂತೆ, ಕಲಾಸಕ್ತರ ಬಹುನಿರೀಕ್ಷಿತ ಚಿತ್ತಾರದ ಜಾತ್ರೆಯಾಗಿದ್ದು, ಪರಿಷತ್ ನ ಆಯೋಜನೆ ಮತ್ತೊಮ್ಮೆ ಯಶಸ್ವಿ ಕಲಾ ಪ್ರದರ್ಶನ, ಮಾರಾಟದ ಮೂಲಕ ನೆರವೇರಿತು.
ಎಲ್ಲರಿಗಾಗಿ ಕಲೆ ಶೀರ್ಷಿಕೆಯಲ್ಲಿ ಚಿತ್ರಸಂತೆ
ಕರ್ನಾಟಕ ಚಿತ್ರಕಲಾ ಪರಿಷತ್ತು 'ಎಲ್ಲರಿಗಾಗಿ ಕಲೆ' ಎಂಬ ಶೀರ್ಷಿಕೆಯಡಿ ಚಿತ್ರಸಂತೆಯನ್ನು ಆಯೋಜಿಸಿದೆ. ಕಲೆ ಎಂಬುದು ಎಲ್ಲರ ಮನೆ-ಮನ ತಲುಪಬೇಕು ಕಲೆಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಲಾ ಪ್ರಚಾರ, ಕಲಾ ಪ್ರಕಾರಗಳನ್ನು ಪರಿಚಯಿಸುವ ಕೆಲಸವಾಗಬೇಕು ಎಂಬ ಆಶಯದೊಂದಿಗೆ ಚಿತ್ರ ಸಂತೆ ಆಯೋಜಿಸಲಾಗಿದೆ.
ಒಂದೇ ಸೂರಿನಲ್ಲಿ ಜಗತ್ತಿನ ಕಲಾವಿದರ ಪರಿಚಯ
ಕಲಾವಿದರ ಪರಿಚಯ: ಇಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಎನ್ನುವ ಭೇದ ಭಾವ ಇರುವುದಿಲ್ಲ. ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಪರಿಣಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಲಾವಿದರ ನಡುವೆ ವಿಚಾರ ವಿನಿಮಯ, ಚರ್ಚೆ, ಸಂವಾದಗಳಿಗೆ ಈ ಚಿತ್ರಸಂತೆ ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶಗಳಿಂದ ಬಂದು ಕಲಾವಿದರು ಇಲ್ಲಿ ತಮ್ಮ ಕಲೆಗಳ ಪ್ರದರ್ಶನ ಮಾಡುತ್ತಿದ್ದಾರೆ.
ಯಕ್ಷಗಾನ, ಪರಿಸರಕ್ಕೆ ಸಂಬಂಧಿಸಿದ ಕಲಾಕೃತಿಗಳು
ಈ ಬಾರಿ ಚಿತ್ರಸಂತೆಯಲ್ಲಿ ಪರಿಸರ, ಯಕ್ಷಗಾನ, ರೈತರು ಹಳ್ಳಿ ಸೊಬಗನ್ನು ಎತ್ತಿ ಹಿಡಿಯುವ ಕಲಾಕೃತಿಗಳ ಪ್ರದರ್ಶನ ನಡೆಯಿತು. ಮೂರು ದಶಕಗಳಿಗೂ ಹಿಂದಿನ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ.
ಕಲಾವಿದರಾದ ಎಸ್.ಜಿ ವಾಸುದೇವ್, ಬಿ.ಕೆ.ಎಸ್. ವರ್ಮಾ, ಕೆ.ಕೆ. ಹೆಬ್ಬಾರ್, ಜಯರಾಂ ಪಾಟೀಲ್, ಜಿ.ಎಸ್. ಖಂಡೇರಾವ್ ಸೇರಿದಂತೆ ದೇಶದ ಹಿರಿಯ ಕಲಾವಿದರ ಅಪರೂಪ ಕಲಾಕೃತಿಗಳು ಪ್ರದರ್ಶನ ನಡೆಯುತ್ತಿದೆ.
ಪರಿಸರ ಜಾಗೃತಿ ಕಲಾಕೃತಿಗಳು
ಜಾಗತೀಕರಣದ ಪ್ರಭಾವದಿಂದಾಗಿ ಜನರು ಪರಿಸರ ಉಳಿವಿನ ಬಗ್ಗೆ ನಿರಾಸಕ್ತರಾಗಿದ್ದಾರೆ. ಹೀಗಾಗಿ ಜನರಲ್ಲಿ ಪರಿಸರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಪರಿಸರ ಕುರಿತು ಕಲಾಕೃತಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಕಲಾವಿದರಿಗೆ ಪ್ರಶಸ್ತಿ ನೀಡಿː ಪ್ರೊ. ಸಿ.ಎನ್.ಆರ್. ರಾವ್
ಕಲೆ ವಿಜ್ಞಾನ ಎರಡೂ ಒಂದೇ ರೀತಿ, ವಿಜ್ಞಾನದಲ್ಲಿ ವರ್ಷ ವರ್ಷಗಳು ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಹಾಗೆಯೇ ಕಲಯೂ ಕೂಡ ಕಲೆಯಲ್ಲೂ ಮಿತಿ ಎನ್ನುವುದಿಲ್ಲ. ಪ್ರತಿನಿತ್ಯವೂ ಹೊಸತನವಿರುತ್ತದೆ. ನನ್ನ ಹೆಸರಿನಲ್ಲಿ ಅತ್ಯುತ್ತಮ ಕಲಾವಿದರಿಗೆ ಪ್ರಶಸ್ತಿ ನೀಡಿ ನಾನು ಚಿತ್ರಕಲಾ ಪರಿಷತ್ತಿಗೆ ಹಣವನ್ನು ನೀಡುತ್ತೇನೆ- ಪ್ರೊ. ಸಿ.ಎನ್.ಆರ್. ರಾವ್, ವಿಜ್ಞಾನಿ
ಕರ್ನಾಟಕ ಚಳವಳಿ ಕಲಾಕೃತಿಗಳು
ಈ ಬಾರಿ ಸ್ವಾತಂತ್ರ್ಯ ನಂತರದ ಕರ್ನಾಟಕದಲ್ಲಿ ಕಲೆ ಬೆಳೆದು ಬಂದ ಹಾದಿಯನ್ನು ಪರಿಚಯಿಸಲಾಗಿದೆ. ಇದಕ್ಕಾಗಿ ಕಲಾ ಇತಿಹಾಸ ವಿಭಾಗವು ವಿಶೇಷವಾಗಿ ಸಂಯೋಜಿಸಿರುವ ಛಾಯಾಚಿತ್ರಗಳು, ಪ್ರಾತ್ಯಕ್ಷಿಕೆ, ಸಾಕ್ಷ್ಯಚಿತ್ರಗಳು, ಪ್ರದರ್ಶನಗೊಂಡವು.