ಚಿತ್ತಾಕರ್ಷಕ ಚಿತ್ರಕಲಾಕೃತಿಗಳಿಂದ ಬರಸೆಳೆಯುವ ಚಿತ್ರಸಂತೆ
ಬೆಂಗಳೂರು, ಡಿಸೆಂಬರ್ 09 : ಕರ್ನಾಟಕ ಚಿತ್ರಕಲಾ ಪರಿಷತ್ತು 14 ನೇ ವರ್ಷದ ಚಿತ್ರಸಂತೆಗೆ ಸಿದ್ಧವಾಗಿದೆ. ಆಧುನಿಕ ಮತ್ತು ಸಮಕಾಲೀನ ಚಿತ್ರಗಳ ಪ್ರದರ್ಶನಕ್ಕೆ ಹೆಸರಾದ ಚಿತ್ರಕಲಾ ಪರಿಷತ್ನ "ಚಿತ್ರ ಸಂತೆಯು' ಈ ಬಾರಿಯೂ ಉದ್ಯಾನನಗರಿ ಜನತೆಗೆ ಚಿತ್ತಾಕರ್ಷಕ ಚಿತ್ರ ಕಲಾಕೃತಿಗಳನ್ನು ಮನ-ಮನೆ ತುಂಬಿಕೊಳ್ಳಲು ವೇದಿಕೆ ಸಜ್ಜುಗೊಳಿಸಿದೆ.
ಕಳೆದ ಒಂದು ದಶಕದಿಂದಲ್ಲೂ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿರುವ ಚಿತ್ರಸಂತೆ ಜನವರಿ ಮೂರನೇ ಭಾನುವಾರ ನಡೆಯಲಿದೆ. ಚಿತ್ರ ಕಲಾಕೃತಿ ಪ್ರದರ್ಶನ ಹಾಗೂ ಮಾರಾಟಕ್ಕೆ ಕಲಾಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.
ಕಲೆಯ ರಂಗಿನಲ್ಲಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ
ಆದರೆ ಹೊಸ ವರ್ಷದ ಮೊದಲ ಭಾನುವಾರ ನಡೆಯುತ್ತಿದ್ದ ಚಿತ್ರ ಸಂತೆ ಈ ಬಾರಿ ಜನವರಿಯ ಮೂರನೇ ಭಾನುವಾರ ನಡೆಯುವ ಸಾಧ್ಯತೆ ಇದೆ. ಈ ಬಾರಿ ಹೊಸ ವರ್ಷದ ಮೊದಲ ದಿನವೇ ಭಾನುವಾರ ಆಗಿದೆ. ಈಗಾಗಲೇ ಜನವರಿ ೮ರಂದು ಚಿತ್ರಸಂತೆ ದಿನಾಂಕ ನಿಗದಿಯಾಗಿದೆ. ಪ್ರಧಾನ ಮಂತ್ರಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಭಾನುವಾರ ನಡೆಯುವ ಸಾಧ್ಯತೆ ಇದೆ.
ಕಲಾವಿದರಿಗೆ ಅವಕಾಶ
ಈ ಸಲದ ಚಿತ್ರಸಂತೆಯಲ್ಲಿ1 ಸಾವಿರ ಮಳಿಗೆಗಳಿಗೆ ಮತ್ತು2 ಸಾವಿರ ಕಲಾವಿದರಿಗೆ ಮಾತ್ರ ಅವಕಾಶವಿದೆ. ಈಗಾಗಲೇ ನೋಂದಣಿ ಆರಂಭವಾಗಿದೆ. ಈಗಾಗಲೇ 500 ಕ್ಕೂ ಹೆಚ್ಚು ಕಲಾವಿದರು ನೋಂದಣಿ ಮಾಡಿಕೊಂಡಿದ್ದಾರೆ. ಡಿ. 10 ನೋಂದಣಿಗೆ ಕೊನೆಯ ದಿನವಾಗಿದೆ ಎಂದು ಚಿತ್ರಕಲಾ ಪರಿಷತ್ತು ಕಾರ್ಯದರ್ಶಿ ಡಿ.ಕೆ. ಚೌಟ ತಿಳಿಸಿದರು.
ಆರು ಅಡಿ ಅಗಲ, ಆರು ಅಡಿ ಉದ್ದದ ಮಳಿಗೆ ವ್ಯವಸ್ಥೆ
ಕರ್ನಾಟಕ ಚಿತ್ರಕಲಾ ಪರಿಷತ್ತು ನಿಗದಿತ ದಿನದೊಳಗೆ ನೋಂದಣಿ ಮಾಡಿಸಿಕೊಂಡಂತಹ ಆಯ್ದ 2 ಸಾವಿರ ಕಲಾವಿದರಿಗೆ ಮಾತ್ರ ತಲಾ ಆರು ಅಡಿ ಅಗಲ ಮತ್ತು ಆರು ಅಡಿ ಉದ್ದವಿರುವ ಮಳಿಗೆಗಳನ್ನು ವ್ಯವಸ್ಥೆ ಮಾಡಿಕೊಡುತ್ತಿದೆ. ದೇಶದ ಮೂಲೆ ಮೂಲೆಗಳಿಂದ ನಮಗೆ ಸಾವಿರಾರು ಅರ್ಜಿಗಳನ್ನೆಲ್ಲ ಪುರಸ್ಕರಿಸಿದೆ ಅಕ್ಕಪಕ್ಕದ ರಸ್ತೆಗಳಲ್ಲೂ ಮಳಿಗೆಗಳನ್ನು ಹಾಕಬೇಕಾಗುತ್ತದೆ ಆಗ ಚಿತ್ರ ಸಂತೆ ಸೊಗಸನ್ನು ಕಳೆದುಕೊಳ್ಳುತ್ತದೆ ಎನ್ನುವುದು ಪರಿಷತ್ ಅವರ ನಂಬಿಕೆಯಾಗಿದೆ.
ಐದು ಲಕ್ಷ ಕಲಾಪ್ರೇಮಿಗಳ ನಿರೀಕ್ಷೆ
ಕಳೆದ ವರ್ಷ ನಾಲ್ಕು ಲಕ್ಷ ಜನರ ಹಾಜರಾತಿಗೆ ಸಾಕ್ಷಿಯಾಗಿದ್ದ ಈ ವಿಶಿಷ್ಟ ಸಂತೆಯಲ್ಲಿ ಐದು ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟಾಗಿತ್ತು. ಕಲೆ ಎಲ್ಲರಿಗಾಗಿ ಎನ್ನುವ ಥೀಮ್ ಹೊಂದಿರುವ ಈ ಸಂತೆಗೆ ಈ ಬಾರಿ ಐದು ಲಕ್ಷಕ್ಕೂ ಹೆಚ್ಚು ಜನ ಬರಬಹುದೆಂದು ಪರಿಷತ್ತು ನಿರೀಕ್ಷಿಸುತ್ತಿದೆ. ಒಂದು ಸಂತೆಯಿಂದ ಇನ್ನೊಂದು ಸಂತೆಗೆ ಕಲಾಪ್ರಿಯರು ಹೆಚ್ಚಾಗುತ್ತಿರುವ ಕಾರಣ ಎಂಟು ಕೋಟಿ ರೂ. ನಿರೀಕ್ಷಿಸುತ್ತಿದೆ.
ಕಿನ್ನಾಳ ಕ್ಯಾಲೆಂಡರ್, ಕಾರ್ಯಕ್ರಮ
ಚಿತ್ರಸಂತೆಯಲ್ಲಿ ಈ ಸಲ ಭಾಷಣವನ್ನು ಕೈಬಿಡಲಾಗಿದೆ. ಬದಲಿಗೆ ಬಯಲು ರಂಗಮಂದಿರದಲ್ಲಿ ಅಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಜಾನಪದ ಸಂಗೀತ, ಸುಗಮ ಸಂಗೀತ, ವಾದ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ಏರ್ಪಡಿಸಲಾಗಿದೆ, ಈ ವೇದಿಕೆಯಲ್ಲಿ ಒಂದೊಂದು ಕಲಾತಂಡಕ್ಕೂ ತಲಾ ಎರಡು ಗಂಟೆಗಳ ಕಾಲ ಅವಕಾಶ ಮಾಡಿಕೊಡಲಾಗುತ್ತದೆ. ಜತೆಗೆ ಕರ್ನಾಟಕದ ವಿಶಿಷ್ಟ ಕಲೆಯಾದ ಕಿನ್ನಾಳ ಕಲೆಯ ಸೊಗಸನ್ನು ಸಾರುವ ವರ್ಣಮಯ ಕ್ಯಾಲೆಂಡರ್ ನ್ನು ಕೂಡ ಚಿತ್ರಸಂತೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.