ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟ ಸಿಎಂ ಭದ್ರತಾ ವಾಹನಗಳು
ಹಾಸನದಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಎಚ್ಎಎಲ್ ಏರ್ ಪೋರ್ಟ್ ರಸ್ತೆಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ ಭದ್ರತಾ ಪಡೆ ಹಾಸ್ಮಾಟ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ ಗಾಗಿ ದಾರಿ ಮಾಡಿಕೊಟ್ಟಿತು.
ಬೆಂಗಳೂರು, ಮೇ 22: ರೋಗಿಯೊಬ್ಬರನ್ನು ಹೊತ್ತುಕೊಂಡು ತೆರಳುತ್ತಿದ್ದ ಆ್ಯಂಬುಲೆನ್ಸ್ ಗಾಗಿ ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ದಾರಿ ಮಾಡಿಕೊಟ್ಟ ಘಟನೆ ಬೆಂಗಳೂರಿನಲ್ಲಿ ಭಾನುವಾರ (ಮೇ 21) ಸಂಜೆ ನಡೆದಿದೆ.
ಭಾನುವಾರ ಹಾಸನಕ್ಕೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಜೆ ವೇಳೆಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆನಂತರ, ಸಿಎಂ ಹಾಗೂ ಅವರ ಭದ್ರತಾ ಸಿಬ್ಬಂದಿಯ ವಾಹನಗಳು ಏರ್ ಪೋರ್ಟ್ ರಸ್ತೆಯ ಮೂಲಕ ಪ್ರಯಾಣ ಬೆಳೆಸಿದವು. ಇದಕ್ಕೆ ಅನುಕೂಲವಾಗಲೆಂದು ಟ್ರಾಫಿಕ್ ಪೊಲೀಸರು ಏರ್ ಪೋರ್ಟ್ ರಸ್ತೆಯಲ್ಲಿ ಸಂಚಾರವನ್ನು ಕೆಲ ಕಾಲ ಸ್ತಬ್ಧಗೊಳಿಸಿದ್ದರು.[ದೊಡ್ಡ ಕೊಂಬಿನ ರಾಜಕಾರಣಿಗಳಿಗೆ ಅಂಬ್ಯುಲೆನ್ಸ್ ಯಾಕೆ ಕಾಣಲ್ಲ!]
ಆದರೆ, ಅದೇ ವೇಳೆ, ಹಾಸ್ಮಾಟ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ ಒಂದು ರೋಗಿಯನ್ನು ಹೊತ್ತುಕೊಂಡು ಏರ್ ಪೋರ್ಟ್ ರಸ್ತೆಗೆ ಬಂತು. ಇದನ್ನು ಗಮನಿಸಿದ ಎಚ್ಎಎಲ್ ಟ್ರಾಫಿಕ್ ಪೊಲೀಸರು ಇದನ್ನು ಸಿಎಂ ಭದ್ರತೆಯ ಜವಾಬ್ದಾರಿ ಹೊತ್ತಿದ್ದ ಹಿರಿಯ ಅಧಿಕಾರಿಯೊಬ್ಬರ ಮೂಲಕ ಗಮನಕ್ಕೆ ತಂದರು.[ಈ ಊರಲ್ಲಿ 108 ಸಂಖ್ಯೆಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಇಲ್ಲ ಅಂತಾರೆ!!]
ತಕ್ಷಣವೇ ಅವರು ಮುಖ್ಯಮಂತ್ರಿಯ ಕಾರಿನ ಚಾಲಕನಿಗೆ ಸೂಚನೆ ನೀಡಿ ಆ್ಯಂಬುಲೆನ್ಸ್ ಹೋಗಲು ಅನುವು ಮಾಡಿಕೊಟ್ಟರು. ಆ್ಯಂಬುಲೆನ್ಸ್ ವಾಹನವು ಮುಖ್ಯಮಂತ್ರಿಗಳ ಕಾರು ಹಾಗೂ ಭದ್ರತಾ ಸಿಬ್ಬಂದಿಗಳ ಕಾರುಗಳೆಲ್ಲವನ್ನೂ ಹಿಂದಿಕ್ಕಿ ತ್ವರಿತಗತಿಯಲ್ಲಿ ಮುಂದೆ ಸಾಗಲು ಅನುಕೂಲವಾಯಿತು.
ಇತ್ತೀಚೆಗಷ್ಟೇ ತುರ್ತಾಗಿ ತೆರಳಬೇಕಿದ್ದ ಆ್ಯಂಬುಲೆನ್ಸ್ ಒಂದನ್ನು ಗೃಹ ಸಚಿವರ ಕಾರಿನ ಭದ್ರತೆಗಾಗಿ ತಡೆದು ನಿಲ್ಲಿಸಿದ್ದರಿಂದ ಸರ್ಕಾರಕ್ಕೆ ಉಂಟಾಗಿದ್ದ ಮುಜುಗರವನ್ನು ಈ ಘಟನೆಯು ಕೊಂಚವಾದರೂ ಮರೆ ಮಾಚುವಲ್ಲಿ ನೆರವಾಗಿದೆ.
{promotion-urls}