ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಸಂದೇಶ್ ಚಮತ್ಕಾರ
ಮೈಯೆಲ್ಲ ಕಣ್ಣಾಗಿಟ್ಟುಕೊಂಡು ಅಡುಗೆ ಮಾಡಿದರೇ ಬಾಯಿಗೆ ಇಡುವುದು ಕಷ್ಟ ಅನ್ನೋ ದಿನಮಾನ ಇದು. ಆದರೆ ಇಲ್ಲೊಬ್ಬರು ವಿಭಿನ್ನ ಸಾಧನೆಗೆ ಹೆಜ್ಜೆ ಇಡುತ್ತಿದ್ದಾರೆ. ಇವರನ್ನು ನೋಡುತ್ತಿದ್ದರೆ ಛಲ ಇದ್ದರೆ ಏನಾದರೂ ಸಾಧಿಸಬಹುದು ಅಂತ ಕೂಡ ಭರವಸೆ ಮೂಡದಿದ್ದರೆ ಹೇಳಿ. ತಂದೆಯ ಬೈಗುಳವನ್ನೇ ಸವಾಲಾಗಿ ತೆಗೆದುಕೊಂಡು ಅಗಾಧವಾಗಿ ಬೆಳೆದು ನಿಂತಿರುವ ವ್ಯಕ್ತಿಯ ಜೀವನ ಗಾಥೆ ಇದು.
ಏನಪ್ಪಾ ಇವರ ಸಾಧನೆ ಅಂದರೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುತ್ತಾರೆ. ರುಚಿ-ಶುಚಿ ಯಾವುದರಲ್ಲೂ ರಾಜೀ ಇಲ್ಲದೆ ಸೊಗಸಾದ, ಸ್ವಾದಿಷ್ಟವಾದ ಅಡುಗೆ ಮಾಡುತ್ತಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯ ಸಂದೇಶ್ ಗೆ ಈಗಿನ್ನೂ ಇಪ್ಪತ್ತೊಂದು ವರ್ಷ ಮಾತ್ರ. ಇದೇ ಶುಕ್ರವಾರದಿಂದ (ಅಕ್ಟೋಬರ್ ಐದು) ಬೆಂಗಳೂರಿನಲ್ಲಿ ಆರಂಭವಾಗುವ ಕಾರ್ಯಕ್ರಮದಲ್ಲಿ ಕಣ್ಣು ಕಟ್ಟಿಕೊಂಡು ಅಡುಗೆ ಮಾಡುತ್ತಾರೆ.
ಹೊಸನಗರ ಯುವಕನ ಪ್ರಯೋಗ: ಅಡಿಕೆಯಿಂದ ತಯಾರಾಗಲಿದೆ ರುಚಿಕರ ಉಪ್ಪಿನಕಾಯಿ
ಯಲಹಂಕದ ನಿಸರ್ಗ ಮೈದಾನದಲ್ಲಿ ಅಕ್ಟೋಬರ್ 5ರಿಂದ ಮೂರು ದಿನ ಬಾಬಾ ಡಾ ದಾಭಾ ಏರ್ಪಡಿಸಿರುವ ಸ್ವದೇಶಿ ಫುಡ್ ಆಂಡ್ ಶಾಪಿಂಗ್ ಮೇಳದಲ್ಲಿ ಕಣ್ ಕಟ್ಟಿ ಮಾಡುವ ಅಡುಗೆ ರುಚಿ ತೋರಿಸಲಿದ್ದಾರೆ ಸಂದೇಶ್. ಮೂಲತಃ ಉಡುಪಿ ಜಿಲ್ಲೆಯವರಾದ ಸಂದೇಶ್ ಅವರ ತಂದೆ ಗಂಗಾವತಿಗೆ ತೆರಳಿ ಹೊಟೆಲ್ ಉದ್ಯಮ ನಡೆಸುತ್ತಿದ್ದಾರೆ.
ತಂದೆಯೇ ನಿಂದನೆಯೇ ಸಾಧನೆಗೆ ಪ್ರೇರಣೆ
ಸಂದೇಶ್ ಪಿಯುಸಿಯಲ್ಲಿ ಫೇಲಾದ ನಂತರ ಅವರ ತಂದೆ, "ನೀನು ಕೆಲಸಕ್ಕೆ ಬಾರದವನು, ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ನಿಂದಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ, ತಂದೆ ನಡೆಸುತ್ತಿರುವ ಹೊಟೆಲ್ ಉದ್ಯಮದಲ್ಲಿಯೇ ಏನಾದರೂ ಹೊಸತನ್ನು ಸಾಧಿಸಬೇಕೆಂಬ ಹಠದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ತರಕಾರಿ ಕತ್ತರಿಸುವಾಗಲು ಕಣ್ಣು ತೆರೆಯಲ್ಲ
ಅಡುಗೆಗೆ ಬೇಕಾಗುವ ಈರುಳ್ಳಿ, ತರಕಾರಿ, ಮೆಣಸಿನಕಾಯಿ ಎಲ್ಲವನ್ನೂ ಕಣ್ಣು ಕಟ್ಟಿಕೊಂಡೇ ಕತ್ತರಿಸುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಅಡುಗೆ ತಯಾರಿಸುವ ಈತ, ಘೀ ರೈಸ್, ಜೀರಾ ರೈಸ್, ವೆಜ್ ಫಲಾವ್, ಮಸಾಲಾ ರೈಸ್, ಗೋಬಿ ಮಂಚೂರಿ, ಇಡ್ಲಿ- ವಡೆ, ದೋಸೆಯನ್ನೂ ರುಚಿ ರುಚಿಯಾಗಿ ಮಾಡುತ್ತಾರೆ.
ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್
ಸಂದೇಶ್ ಕೈ ಅಡುಗೆ ಸವಿಯಲು ಅವಕಾಶ
ಸಂದೇಶ್ ಕಣ್ಣು ಕಟ್ಟಿಕೊಂಡು ತಯಾರಿಸುವ ಅಡುಗೆಯನ್ನು ಯಲಹಂಕದ ನಿಸರ್ಗ ಮೈದಾನಕ್ಕೆ ತೆರಳಿ ಬಿಸಿ ಬಿಸಿಯಾಗಿಯೇ ಸವಿಯಬಹುದು. ಅದರ ಜೊತೆಗೆ ದಸರಾ ಗೊಂಬೆಗಳ ಪ್ರದರ್ಶನ, ಸಿರಿಧಾನ್ಯಗಳ ಮೇಲೆ ಬಿಡಿಸಿರುವ ಕಲಾಕೃತಿ, ಭಾರತೀಯ ಸಾಂಪ್ರದಾಯಿಕ ಫ್ಯಾಷನ್ ಶೋ ಕೂಡ ನೋಡಿಕೊಂಡು ವಾರಾಂತ್ಯದ ಮಜಾ ಸವಿಯಬಹುದು.
ಏಳು ವರ್ಷದಿಂದ ನಡೆದಿದೆ ಕಣ್ಣಿಗೆ ಕಟ್ಟಿಕೊಂಡು ಅಡುಗೆ
ಕಳೆದು ಏಳು ವರ್ಷದಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುತ್ತಿದ್ದೇನೆ. ಭಾರತದಲ್ಲಿ ಇದುವರೆಗೂ ಯಾರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡಿಲ್ಲ. ಬಹುತೇಕ ಎಲ್ಲ ರೀತಿಯ ಅಡುಗೆಗಳನ್ನು ಮಾಡುತ್ತೇನೆ. ಆರು ಗಂಟೆಗಳ ಕಾಲ ನಿರಂತರವಾಗಿ ಅಡುಗೆ ಮಾಡಿದ್ದು ಇಲ್ಲಿಯವರೆಗಿನ ದಾಖಲೆ. ವಿಶ್ವ ದಾಖಲೆ ಮತ್ತು ಗಿನ್ನಿಸ್ ದಾಖಲೆಗೆ ಹೆಸರು ನೋಂದಾಯಿಸಿದ್ದೇನೆ. ಆರ್ಥಿಕ ತೊಂದರೆಯಿಂದ ಪ್ರವೇಶ ಶುಲ್ಕ ಭರಿಸಲು ಸಾಧ್ಯವಾಗಿಲ್ಲ. ಮುಂದೊಂದು ದಿನ ಗಿನ್ನಿಸ್ ದಾಖಲೆಗೆ ಸೇರುವ ಭರವಸೆ ಇದೆ ಎನ್ನುತ್ತಾರೆ ಸಂದೇಶ್ ದೊಡಮನಿ.