ವಿದ್ವತ್ ಮೇಲಿನ ಹಲ್ಲೆ: ಸಿಸಿಬಿ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಏನಿದೆ?
ಬೆಂಗಳೂರು, ಮೇ 21: ವಿದ್ವತ್ ಹಲ್ಲೆ ಪ್ರಕರಣದಲ್ಲಿ ಮೊದಲಿಗೆ ಜಗಳ ತೆಗೆದಿದ್ದೇ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮದ್ ನಲಪಾಡ್. ವಿದ್ವತ್ ನ ಕೊಂದುಹಾಕಿ ಎಂದು ನಲಪಾಡ್ ತನ್ನ ಸಹಚರರಿಗೆ ಹೇಳುತ್ತಿದ್ದ ಎಂಬ ಸಂಗತಿಯು ಸಿಸಿಬಿ ಪೊಲೀಸರು ದಾಖಲಿಸಿರುವ ಚಾರ್ಜ್ ಶೀಟ್ ನಲ್ಲಿದೆ.
ಯು.ಬಿ.ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ಮಾರ್ಚ್ ಹತ್ತೊಂಬತ್ತರಂದು ನಲಪಾಡ್ ನ ಕಾಲು ವಿದ್ವತ್ ನ ಬಲಗಾಲಿಗೆ ತಾಗಿತ್ತು. ವಿದ್ವತ್ ಬಲಗಾಲಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಕಲಾಗಿತ್ತು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿತ್ತು. ಈ ವೇಳೆ ವಿದ್ವತ್ ನನ್ನು ಬೈಯ್ದ ನಲಪಾಡ್ ತನ್ನ ಕಾಲಿಗೆ ಮುತ್ತಿಟ್ಟು, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದ.
ವಿದ್ವತ್ ಮೇಲೆ ಹಲ್ಲೆ ಪ್ರಕರಣ : ಸಿಸಿಬಿ ಪೊಲೀಸರಿಂದ 600 ಪುಟಗಳ ಚಾರ್ಜ್ಶೀಟ್
"ನಾನು ಸ್ಥಳೀಯ ಶಾಸಕರ ಮಗ. ನೀನು ನನ್ನ್ ಶೂಗೆ ಸಮಾನವಲ್ಲ. ಕ್ಷಮೆ ಕೇಳಿ, ನನ್ನ ಕಾಲಿಗೆ ಮುತ್ತಿಡು" ಎಂದು ನಲಪಾಡ್ ಧಮಕಿ ಹಾಕಿದ್ದ. ಯಾವಾಗ ಹಾಗೆ ಮಾಡಲು ವಿದ್ವತ್ ಒಪ್ಪಲಿಲ್ಲವೋ ಆಗ ನಲಪಾಡ್ ಮತ್ತು ಆತನ ಸಹಚರರು ಗಾಜಿನ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ತೀರಾ ಗಂಭೀರವಾದ ಗಾಯಗಳಾದ ನಂತರವೂ ವಿದ್ವತ್ ಮೇಲೆ ಹಲ್ಲೆ ಮುಂದುವರಿಸಲಾಯಿತು. ನೀನು ಕ್ಷಮೆ ಕೇಳದಿದ್ದರೆ ನಾನು ಇಲ್ಲೇ ನಿನ್ನನ್ನು ಕೊಂದುಬಿಡ್ತೀನಿ ಎಂದು ನಲಪಾಡ್ ಬೆದರಿಕೆ ಒಡ್ಡಿದ್ದಾಗಿ ಚಾರ್ಜ್ ಶೀಟ್ ನಲ್ಲಿ ದಾಖಲಾಗಿದೆ.
ನಲಪಾಡ್ ನ್ಯಾಯಾಂಗ ಬಂಧನ ಮೇ 25ರ ತನಕ ವಿಸ್ತರಣೆ
ಚಾರ್ಜ್ ಶೀಟ್ ನಲ್ಲಿ ಇಪ್ಪತ್ಮೂರು ಸಾಕ್ಷಿಗಳ ಹೇಳಿಕೆ ದಾಖಲು ಮಾಡಲಾಗಿದೆ. ನಲಪಾಡ್ ಸೇರಿದಂತೆ ಏಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ನಡೆದ ಎರಡು ತಿಂಗಳ ನಂತರವೂ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.