ಅಧಿಕೃತ ಕನ್ನಡ ಧ್ವಜಕ್ಕೆ ಆಕ್ಷೇಪ ಇಲ್ಲ ಎಂದ ಚಂಪಾ!
ಬೆಂಗಳೂರು, ಮಾರ್ಚ್ 05: ಹೊಸ ಸ್ವರೂಪ ಪಡೆದಿರುವ ನಾಡಧ್ವಜಕ್ಕೆ ನಮ್ಮದು ಅಭ್ಯಂತರವಿಲ್ಲ ಎಂದು ಸಾಹಿತಿ ಡಾ. ಚಂಪಾ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕೆಂಪು, ಹಳದಿಯ ನಡುವೆ ಗಂಡ ಬೇರುಂಡವುಳ್ಳ ಹೊಸ ಸ್ವರೂಪದ ನಾಡಧ್ವಜಕ್ಕೆ ನಮ್ಮ ಯಾವುದೇ ಆಕ್ಷೇಪಣೆಗಳಿಲ್ಲ. ಈಗಿರುವ ಕನ್ನಡ ಧ್ವಜ ಕನ್ನಡ ಪಕ್ಷದ ರಾಜಕೀಯ ಧ್ವಜವಾಗಿ ಇತ್ತು. ಹಾಗಾಗಿ ನಾಡಧ್ವಜವಾಗಿ ಅಂಗೀಕರಿಸಲು ತಾಂತ್ರಿಕ ಅಡಚಣೆಯಾಗಿತ್ತು ಎಂದರು.
ಸರಕಾರಕ್ಕೆ ನಾಡಧ್ವಜ ಸಮಿತಿಯಿಂದ ವರದಿ ಸಲ್ಲಿಕೆ, ಅಧಿವೇಶನದಲ್ಲಿ ಚರ್ಚೆ
ಅದನ್ನು ಪರಿಶೀಲಿಸಿ ಗಂಡಬೇರುಂಡವುಳ್ಳ ಹೊಸ ಧ್ವಜವನ್ನು ರೂಪಿಸಲಾಗಿದೆ. ನಾಡಿಗೆ ಪ್ರತ್ಯೇಕ ಧ್ವಜ ನೀಡಬೇಕೆಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಅದಕ್ಕೆ ಸಮಿತಿ ರಚನೆ ಮಾಡಿತು. ಆ ಸಮಿತಿ ನೀಡಿದ ವರದಿಯನ್ವಯ ರೂಪಿಸಿರುವ ನಾಡಧ್ವಜಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿದರು.
ನಾಡಧ್ವಜ ಸಂಬಂಧ ಸಮಿತಿ ನೀಡಿರುವ ವರದಿಯನ್ನು ಸರ್ಕಾರ ಜಾರಿಗೊಳಿಸಲಿ. ಅದು ಕನ್ನಡ ಅಸ್ಮಿತೆಯ ಸಂಕೇತ, ನಮ್ಮನ್ನು ನೋಡಿ ಇತರ ರಾಜ್ಯಗಳು ಪ್ರತ್ಯೇಕ ಧ್ವಜ ಕೇಳಿದರೂ ಉತ್ತಮ. ಕನ್ನಡಿಗರಿಗೆ ಆದ್ಯತೆ: ರಾಜ್ಯ ಸಭೆಗೆ ಕನ್ನಡಿಗರನ್ನೇ ಅಯ್ಕೆ ಮಾಡಬೇಕು. ಸಂಸತ್ ನಲ್ಲಿ ಕನ್ನಡಿಗರ ಧ್ವನಿ ಮೊಳಗಬೇಕು ಎಂದು ಚಂಪಾ ಒತ್ತಾಯಿಸಿದರು.