ಇಂದಿರಾ ಕ್ಯಾಂಟೀನ್ ಗಾಗಿ ಐತಿಹಾಸಿಕ ದೇಗುಲದ ಭಾಗ ಧ್ವಂಸ
ಬೆಂಗಳೂರು, ಆಗಸ್ಟ್ 01: ಬೆಂಗಳೂರಿನ ಐತಿಹಾಸಿಕ ಹೆಗ್ಗುರುತಾಗಿರುವ 300 ವರ್ಷ ಪುರಾತನ ಹಿಂದೂ ಮಂದಿರದ ಆವರಣದಲ್ಲಿ 'ಇಂದಿರಾ ಕ್ಯಾಂಟೀನ್' ಏಕೆ ನಿರ್ಮಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರ ಮೇಲೆ ಹಲ್ಲೆ ಮಾಡಲಾಯಿತೆ?
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಬಳಿಯಿರುವ ರಾಮೇಶ್ವರ ದೇಗುಲದ ಗೋಡೆಯನ್ನು ಸೋಮವಾರ ರಾತ್ರಿಯೇ ಕೆಡವಲಾಗಿದೆ, ಹಳೆಯ ಮರಗಳನ್ನು ಕೂಡ ಕತ್ತರಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಪತ್ರಕರ್ತರ ಮೇಲೆ ಕಾರ್ಪೊರೇಟರ್ ಕೋಕಿಲಾ ಅವರ ಪತಿ ಮಾಜಿ ಬಿಬಿಎಂಪಿ ಸದಸ್ಯ ಚಂದ್ರಶೇಖರ್ ಅವರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದು ರಾಜಕೀಯ ದುರಂಕಾರವಲ್ಲದೆ ಮತ್ತೇನೂ ಅಲ್ಲ. ರಾಜಕಾರಣಿಗಳು ಈರೀತಿ ಸಂವೇದನೆ ಕಳೆದುಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ರಾಮಕೃಷ್ಣ ಉಪಾಧ್ಯ ಅವರು, ಸರಕಾರದ ಕ್ರಮದ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬೆಂಗಳೂರಿನ ನಾಗರಿಕರನ್ನು ಕೋರಿದ್ದಾರೆ.
ಆದರೆ, ಸಮಯಕ್ಕೆ ಸರಿಯಾದ ಪೊಲೀಸರು ಮಧ್ಯ ಪ್ರವೇಶಿಸಿ, ರಾಮಕೃಷ್ಣ ಅವರನ್ನು ಬಚಾವ್ ಮಾಡಿದ್ದಾರೆ. ವಿಜಯ್ ಟೈಮ್ಸ್ ನ ಸಂಪಾದಕರಾಗಿದ್ದ ರಾಮಕೃಷ್ಣ ಅವರು 2014ರಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ಬಿನ ಅಧ್ಯಕ್ಷರಾಗಿದ್ದರು.
ಚಾಮರಾಜಪೇಟೆಯ ಐತಿಹಾಸಿಕ ರಾಮೇಶ್ವರ ದೇಗುಲದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ ಅಧಿಕಾರಿಗಳು, ಕಾರ್ಪೊರೇಟರ್ ಕೋಕಿಲಾ ಅವರು ಮುಂದಾಗಿದ್ದರು. ಸೋಮವಾರದಂದು ದೇಗುಲದ ಒಂದು ಭಾಗದ ಗೋಡೆ ಹಾಗೂ ಕಾಂಪೌಂಡ್ ನೆಲಸಮಗೊಳಿಸಲಾಗಿತ್ತು.
ಕ್ಯಾಂಟೀನ್ ಕಾಮಗಾರಿಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪಾರಂಪರಿಕ, ಐತಿಹಾಸಿಕ ಕಟ್ಟಡ, ದೇಗುಲಗಳನ್ನು ಹಾಳುಗೆಡವಿದ್ದೇಕೆ ಎಂದು ರಾಮಕೃಷ್ಣ ಅವರು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಬಿಬಿಎಂಪಿಯ ಅಧಿಕಾರಿಗಳ ಬೇಜವಾಬ್ದಾರತನದಿಂದ 300 ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.