ಚಾಮರಾಜಪೇಟೆಯ ಗಣೇಶ್ ಸ್ವೀಟ್ಸ್ ರಾಜ್ ಲಡ್ಡು, ಅಜ್ಬೀರ್ ಪಾಕ್...
"ನನಗೆ ಪರಿಚಯ ಇರುವ ಬಹಳ ಜನ ಪೊಲೀಸರು ಅದೇ ಅಂಗಡಿಯಲ್ಲೇ ಸ್ವೀಟ್ ತಗೊಂಡು ಹೋಗಿ ತಮ್ಮ ಆಫೀಸರ್ ಗಳಿಗೆ ಕೊಟ್ಟು ರಜಾ ಓಕೆ ಮಾಡಿಸಿಕೊಳ್ತಾರೆ. ನನ್ನ ಸ್ನೇಹಿತರು ತಮ್ಮ ಮದುವೆ ಲಗ್ನ ಪತ್ರಿಕೆ ಕೊಡುವುದಕ್ಕೆ ಹೋಗುವಾಗ ಇಲ್ಲಿಂದಲೇ ಸಿಹಿ ತಿಂಡಿ ತೆಗೆದುಕೊಂಡು ಹೋಗಿ, ವಾರಾನುಗಟ್ಟಲೆ ಹೆಚ್ಚು ರಜಾ ಸ್ಯಾಂಕ್ಷನ್ ಮಾಡಿಸಿಕೊಂಡಿದ್ದಾರೆ" ಅಂತಲೂ ಆತ ಸೇರಿಸಿದರು.
ಹೀಗೆ ಒಂದು ಸ್ವೀಟ್ ಅಂಗಡಿ ಬಗ್ಗೆ ಹೇಳಿದವರ ಹೆಸರು ಮಲ್ಲಿಕಾರ್ಜುನ ಗೌಡ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅವರ ಮನೆ. ಅದೇ ಚಾಮರಾಜಪೇಟೆಯ ಎರಡನೇ ಮುಖ್ಯರಸ್ತೆಯಲ್ಲಿರುವ ಮೈದಾನದ ಎದುರಿಗೆ ಇರುವ ಗಣೇಶ್ ಸ್ವೀಟ್ಸ್ ಮುಂದೆ ನಿಂತು ಇಂಥ ಬೇಕಾದಷ್ಟು ಉದಾಹರಣೆಗಳನ್ನು ಹೇಳುತ್ತಿದ್ದರು.
ಜಯನಗರದ ಹುಡ್ಗಿ ಜತೆ ತಿಂಡಿಪೋತರ ಸ್ವರ್ಗ ಬೆಂಗ್ಳೂರಲ್ಲಿ ಸುತ್ತಾಟ
ತಮ್ಮ ಅಭಿಮಾನದ ಕಾರಣಕ್ಕೆ ಒಂದು ಉದಾಹರಣೆಗೆ ನಾಲ್ಕಾರು ವಿಚಾರ ಸೇರಿಸಿ ಹೇಳುವುದು ಸಹಜ ಅಲ್ಲವೇ ಎಂದು ಮನಸ್ಸು ಸಣ್ಣದೊಂದು ಗುಮಾನಿ ವ್ಯಕ್ತಪಡಿಸಿತು. ಹೌದು, ಹೀಗೆ ಆ ಸ್ವೀಟ್ ಅಂಗಡಿಯನ್ನು ಹೊಗಳಿದರೆ ಈ ವ್ಯಕ್ತಿಗಾದರೂ ಏನು ಲಾಭ ಎಂದು ಮನಸಿನ ಮತ್ತೊಂದು ಮೂಲೆಯಿಂದ ತರ್ಕ ಎದ್ದು ನಿಂತಿತು.
ರಾಜ್ ಲಡ್ಡು ರುಚಿಯೋ ರುಚಿ
ಸರಿ, ಹಾಗಿದ್ದರೆ ನಾನು ಯಾವ ಸ್ವೀಟ್ ತೆಗೆದುಕೊಳ್ಳಲಿ ಹೇಳಿ, ನನಗೆ ಮದುವೆ ನಿಶ್ಚಯ ಆಗಿರುವ ಹುಡುಗಿಗೆ ಕಳುಹಿಸಬೇಕು ಅಂದೆ. ರಾಜ್ ಲಡ್ಡು ತಗೊಳ್ಳಿ. ಅದನ್ನಾದರೆ ದೂರದ ಊರಿಗೂ ಕಳುಹಿಸಬಹುದು. ಸ್ವಲ್ಪ ಪುಡಿ ಆಗಬಹುದೇನೋ ಆದರೆ ಜಿಡ್ಡು ಬಿಟ್ಟುಕೊಳ್ಳುವಂಥದ್ದೇನೂ ಆಗುವುದಿಲ್ಲ ಅಂದರು ಮಲ್ಲಿಕಾರ್ಜುನ. ಯಾಕೆ ಬೇಕು ರಿಸ್ಕ್ ಅಂದುಕೊಂಡು ಇಲ್ಲೇ ತಿನ್ನುವುದಕ್ಕೆ ಒಂದು ರಾಜ್ ಲಡ್ಡು ಕೊಡಿ ಅಂತ ಅಲ್ಲಿರುವ ಐದಾರು ಜನ ಕೆಲಸಗಾರರನ್ನು ನೋಡುತ್ತಾ ಹೇಳಿ, ಐದರಿಂದ ಹತ್ತು ನಿಮಿಷ ಆದ ಮೇಲೆ ಲಾಡು ಅಲ್ಲೇ ತಿನ್ನುವುದಕ್ಕೆ ಅಂತ ಕೊಟ್ಟರು. ಕೊಸರಿಗೆ ಅಂತ ಒಂದಿಷ್ಟು ಖಾರ ಕೂಡ ಕೊಟ್ಟಿದ್ದರು. ಆ ಲಾಡು ಸ್ವಲ್ಪ ಮುರಿದು, ನಾಲಗೆ ಮೇಲೆ ಇಡುತ್ತಿದ್ದಂತೆಯೇ ಕಣ್ಣು ತಾನಾಗಿಯೇ ಅರಳಿತು.
ಅರ್ಧ ಕೇಜಿ ಆರ್ಡರ್ ಬದಲು ಒಂದು ಕೇಜಿ ಹೇಳಿದ್ದೆ
ಅರ್ಧ ಕೇಜಿ ರಾಜ್ ಲಡ್ಡು ಹೇಳಬೇಕೆಂದು ಇದ್ದವನು ಅರ್ಧ ಕೇಜಿಯ ಎರಡು ಹಾಗೂ ಕಾಲು ಕೇಜಿಯ ಮತ್ತೆರಡು ಪಾರ್ಸಲ್ ಮಾಡಿ ಅಂತ ಹೇಳಿ, ಬಿಲ್ಲಿಂಗ್ ಕೌಂಟರ್ ಕಡೆಗೆ ಹೊರಟೆ. ಮದುವೆ ನಿಶ್ಚಯ ಆಗಿರುವ ಹುಡುಗಿಗೆ ಕಳುಹಿಸುವ ಸ್ವೀಟಿನ ಜತೆಗೆ ಮದುವೆಗೆ ರಜಾ ನೀಡಬೇಕಾದ ಆಫೀಸರ್ ಗೂ ಒಂದರ್ಧ ಕೇಜಿ ಕೊಟ್ಟರೆ ಅನುಕೂಲ ಆಗಬಹುದು ಅನ್ನಿಸಿ ಹಾಗೆ ಮಾಡಿದ್ದೆ.
ಅಜ್ಬೀರ್ ಪಾಕ್ ಎಂಬ ಮತ್ತೊಂದು ಸಿಹಿ
ಆ ಕೌಂಟರ್ ನಿಂದ ಸುತ್ತಲೂ ಗಮನಿಸುತ್ತಿದ್ದವನಿಗೆ ಮತ್ತೆ ಮಲ್ಲಿಕಾರ್ಜುನ ಕರೆದರು. ಪುರಾಣ ಪ್ರಸಿದ್ಧ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಅಲ್ಲಿನ ವಿಶೇಷತೆ ಹೇಳುತ್ತಾರಲ್ಲ ಅಂಥ ಉತ್ಸಾಹದಲ್ಲಿದ್ದ ಅವರು, ಇದು ಅಜ್ಬೀರ್ ಪಾಕ್. ಇದು ಬಲೇ ರುಚಿ. ಇದೇ ಊರಿನಲ್ಲಿ ತೆಗೆದುಕೊಂಡು ಹೋಗುವುದಾದರೆ ಒಂದರ್ಧ ಕೇಜಿ ಹೇಳಿ ಅಂದರು. ಈ ಸಲ ಯಾವುದೇ ಅನುಮಾನ ಮಾಡದೆ ಒಂದು ಕೇಜಿಯೇ ತೆಗೆದುಕೊಂಡೆ. ಆ ನಂತರ ತಿನ್ನುವಾಗ ಕೂಡ ಅದು ನಿರೀಕ್ಷೆ ಹುಸಿ ಮಾಡಲಿಲ್ಲ.
ಸ್ಪೆಷಲ್ ಮೈಸೂರು ಪಾಕ್ ಖರೀದಿಗೆ ಅಪ್ಪಣೆ
ಇಲ್ಲಿ ಮೈಸೂರು ಪಾಕ್ ಬಹಳ ರುಚಿಯಾಗಿರುತ್ತದೆ. ಅದನ್ನೂ ಪ್ರಯತ್ನ ನೋಡಿಬಿಡಿ ಅಂತೊಂದು ಅಪ್ಪಣೆ ಕೇಳಿಬಂತು. ಇದು ಯಾಕೋ ಒಂದು ಸಲಕ್ಕೆ ಮುಗಿಯುವ ಲೆಕ್ಕಾಚಾರ ಅಲ್ಲ ಅನ್ನಿಸಿ, ಎರಡು ಕೇಜಿ ಮಿಕ್ಸ್, ಅರ್ಧ ಕೇಜಿ ಖಾರ ಪಾರ್ಸಲ್ ಮಾಡಿ, ಬಿಲ್ ಎಷ್ಟಾಯಿತು ಅಂತ ಹೇಳಿದವನೇ ಏನಕ್ಕೂ ಕಿವಿ ಕೊಡಬಾರದೆಂದು ಬಿಲ್ ಕೌಂಟರ್ ಕಡೆಗೆ ಹೊರಟೆ.
ಅನೇಕರಿಗೆ ಈ ಅಂಗಡಿ ಪರಿಚಯಿಸಿದ್ದೇನೆ
ಬಾದಾಮಿ ಹಾಲು, ಗೋಡಂಬಿ, ಬಾದಾಮಿ ಹಾಲು, ಬೆಂಗಾಲಿ ಸ್ವೀಟ್ಸ್, ಮಿಕ್ಸ್ ಚರ್, ಪಕೋಡ...ಏನು ಬೇಕೋ ನೋಡಿ ಅಂದರು ಗಲ್ಲಾ ಮೇಲೆ ಕೂತಿದ್ದ ಯಜಮಾನರು. ಒಂದು ಸಲ ಮಲ್ಲಿಕಾರ್ಜುನ ಅವರ ಕಡೆ ನೋಡಿದೆ. ಗಲ್ಲಾ ಮೇಲೆ ಕೂತಿದ್ದ ಯಜಮಾನರು- ಈ ಮಲ್ಲಿಕಾರ್ಜುನ ಅವರ ಮುಖ ಒಂದೇ ರೀತಿ ಕಂಡಿತು. ಅಷ್ಟರಲ್ಲಿ ಬಿಲ್ ಬಂದಿತು. ಎಲ್ಲ ಸ್ವೀಟ್ಸ್- ಖಾರ ತೆಗೆದುಕೊಂಡು ಜಾಗ ಬಿಟ್ಟೆ. ಆ ಘಟನೆ ನಂತರ ಅನೇಕರಿಗೆ ಆ ಸ್ವೀಟ್ ಅಂಗಡಿಯನ್ನು ಪರಿಚಯಿಸಿದ್ದೇನೆ: ಅಮೆರಿಕವನ್ನು ಕಂಡು ಹಿಡಿದ ಕೊಲಂಬಸ್ ನಂತೆ. ಗಣೇಶ್ ಸ್ವೀಟ್ಸ್ ಅದೆಷ್ಟೋ ಮಂದಿಯ ಬದುಕಲ್ಲಿ ಬದಲಾವಣೆ ತಂದಿದೆ. ನಿಮ್ಮ ಜೀವನದಲ್ಲೂ ತರಲಿ.