ಏ.28ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ
ಬೆಂಗಳೂರು, ಏಪ್ರಿಲ್ 21: ರಂಗನಿರಂತರ ಸಾಂಸ್ಕೃತಿಕ ಸಂಘವು ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏ.28ರಿಂದ ಮೇ 4ರವರೆಗೆ ಹಮ್ಮಿಕೊಂಡಿದೆ.
ಸಿಜಿಕೆ ಎಂದೇ ಖ್ಯಾತರಾಗಿರುವ ಸಿಜಿ ಕೃಷ್ಣಸ್ವಾಮಿ ಅವರು ಸ್ಥಾಪಿಸಿರುವ ರಂಗನಿರಂತರ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಂಡಿದೆ.ಏಪ್ರಿಲ್ 28ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6.45ಕ್ಕೆ ದಿಶಾ ರಮೇಶ್ ಅವರಿಂದ ರಂಗಗೀತೆಗಳು ಮೂಡಿಬರಲಿದೆ.
ಚಿಂತಕ ಡಾ. ರಾಜೇಂದ್ರ ಜೆನ್ನಿಯವರು ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಡಾ. ಡಿ.ಕೆ. ಚೌಟ ಅಧ್ಯಕ್ಷತೆವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರತಿ ದಿನ ಸಂಜೆ 7ಗಂಟೆಗೆ ರಂಗೋತ್ಸವ ಆರಂಭವಾಗಲಿದೆ. ಏ.29ರಂದು ಎ. ಮಂಗೈ ನಿರ್ದೇಶನದ, ಇಂಕ್ವಿಲಾಬ್ ರಚಿತ ಅವ್ವೈ ತಮಿಳು ನಾಟಕವನ್ನು ಮರಪ್ಪಚ್ಚ ತಂಡವು ಪ್ರದರ್ಶಿಸುತ್ತಿದೆ. ಏಪ್ರಿಲ್ 30ರಂದು ಫಜಾ ಜಲಾಲಿ ರಚಿಸಿ ನಿರ್ದೇಶಿಸಿರುವ ಶಿಖಂಡಿ ಇಂಗ್ಲಿಷ್ ನಾಟಕವನ್ನು ಫಾಟ್ಸ್ ದ ಆರ್ಟ್ಸ್ ತಂಡ ಪ್ರದರ್ಶಿಸಲಿದೆ.
ಮೇ.1ರಂದು ಚಂದ್ರಕೀರ್ತಿ ನಿರ್ದೇಶಿಸಿದ, ಬರ್ಟೋಲ್ಡ್ ಬ್ರೇಕ್ಟ್ ರಚಿತ, ಜಿ.ಎನ್. ರಂಗನಾಥ ರಾವ್ ಅನುವಾದಿಸಿರುವ ಕಕೇಷಿಯನ್ ಚಾಕ್ ಸರ್ಕಸ್ ಕನ್ನಡ ನಾಟಕವನ್ನು ಥಿಯೇಟರ್ ಆರ್ಟಿಸ್ಟ್ರೀ ಅವರು ಅಭಿನಯಿಸಲಿದ್ದಾರೆ. ಮೇ.2ರಂದು ಶ್ರೀಕಾಂತ್ ಭೀಡೆ ನಿರ್ದೇಶನದ ದಿ ಟ್ರಾನ್ಸ್ ಫರೆಂಟ್ ಟ್ರಾಪ್ ಮರಾಠಿ ನಾಟಕವನ್ನು ದ್ಯಾಸ್ ತಂಡ ಅಭಿನಯಿಸುತ್ತಿದೆ.
ಮೇ 3ರಂದು ಡಾ. ಇಂದುದಿಪ ಸಿನ್ಹ ರಚಿಸ, ನಿರ್ದೇಶಿಸಿರುವ ಕೋಡ್ ರೆಡ್ ಮಂಗಾಳಿ ನಾಟಕವನ್ನು ಪ್ರಾಜೆಕ್ಟ್ ಪ್ರಾಮೊಥಿಯೇಸ್ ಅಭಿನಯಿಸುತ್ತಿದೆ. ಮೇ 4 ರಂದು ಅನುರೂಪ್ ರಾಯ್ ರಚಿಸಿ, ನಿರ್ದೇಶಿಸಿರುವ ಮಹಾಭಾರತ ನಾಟಕ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕಠ್ ಕಥಾ ಪೊಪೆಟ್ ಆರ್ಟ್ಸ್ ಟ್ರಸ್ಟ್ ಪ್ರದರ್ಶಿಸುತ್ತಿದೆ.