ಪೊಲೀಸ್ ಖಜಾನೆಯಿಂದಲೇ 3 ಕೋಟಿ ದೋಚಿದ ಪೊಲೀಸರು
ಬೆಂಗಳೂರು, ಡಿಸೆಂಬರ್ 01 : ಸಿಸಿಬಿ ಪೊಲೀಸರೇ ದರೋಡೆ ಮಾಡಿರುವ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸೀಜ್ ಮಾಡಿದ್ದ ಹಳೆಯ ನೋಟುಗಳನ್ನು ಪೊಲೀಸರು ಕೇಂದ್ರ ಕಚೇರಿಯಿಂದಲೇ ಎಗರಿಸಿದ್ದಾರೆ.
ಒಂದು ವಾರದ ಹಿಂದೆ ತಮಿಳುನಾಡಿನ ವ್ಯಕ್ತಿಯೊಬ್ಬರು ಹಳೆ ನೋಟುಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಹಣ ಬದಲಾವಣೆ ಮಾಡಲು ಬಂದಿದ್ದ, ಈ ವಿಚಾರ ತಿಳಿದು ಸಿಸಿಬಿ ಎಸಿಪಿ ಮರಿಯಪ್ಪ ಮತ್ತು ಕೆಲವು ಪೇದೆಗಳು ತಮಿಳುನಾಡಿನ ವ್ಯಕ್ತಿ ಬಳಿಯಿಂದ ಹಣ ಕಿತ್ತುಕೊಂಡು ಹೋಗಿದ್ದರು. ಹಣ ಕಿತ್ತುಕೊಂಡು ಹೋಗಿ ಕೇರಳದಲ್ಲಿ ಒಂದು ಕೋಟಿ ನೀಡಿ 8 ಲಕ್ಷ ಪಡೆದು ಅಷ್ಟನ್ನೂ ಅಲ್ಲೆ ಖಾಲಿ ಮಾಡಿದ್ದರು.
ಹಣ ಕಳೆದುಕೊಂಡ ತಮಿಳುನಾಡಿನ ವ್ಯಕ್ತಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಬಳಿ ಹೋಗಿ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳು ಮರಿಯಪ್ಪನನ್ನು ಕರೆದು ಬೈದು ತಮಿಳುನಾಡಿನವನಿಗೆ ಹಣ ಹೀಂತಿರುಗಿಸುವಂತೆ ಹೇಳಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಹೆದರಿದ ಮರಿಯಪ್ಪ ಸಿಸಿಬಿ ಖಜಾನೆಯಿಂದ ಮೂರು ಕೋಟಿ ರೂಪಾಯಿ ಕದ್ದು ಆತನಿಗೆ ವಾಪಾಸ್ ನೀಡಿದ್ದ. ಮಧ್ಯರಾತ್ರಿ ಸಿಸಿಬಿ ಕಚೇರಿಗೆ ನುಗ್ಗಿ ಖಜಾನೆಯಿಂದ ಮರಿಯಪ್ಪ ಹಣ ಹೊತ್ತೊಯ್ದಿದ್ದ.
ನಂತರ ಖಜಾನೆ ಇಂದ ಕದ್ದ ಹಣ ವಾಪಾಸ್ ಇಡಲೆಂದು ಶೇಷಾದ್ರಿಪುರಂನಲ್ಲಿ ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ನಡೆಸಿ ಒಂದು ಕೋಟಿ ಹಣ ಬಲವಂತದಿಂದ ಹೊತ್ತೊಯ್ದಿದ್ದರು. ಎಸಿಪಿ ಮರಿಯಪ್ಪನ ವರ್ತನೆಯಿಂದ ರೋಸಿಹೋದ ಮಹಿಳೆ ಡಿಸಿಪಿ ಚಂದ್ರಗುಪ್ತ ಅವರಿಗೆ ದೂರು ನೀಡಿದ್ದಾರೆ, ಡಿಸಿಪಿ ಚಂದ್ರಗುಪ್ತ ಅವರು ಪ್ರಕರಣದ ತನಿಖೆ ನಡೆಸುವಂತೆ ಆಯುಕ್ತ ಸುನೀಲ್ ಕುಮಾರ್ ಅವರನ್ನು ನೇಮಿಸಿದ್ದರು. ತನಿಖೆ ಪೂರ್ಣವಾಗುವ ಮುನ್ನವೇ ಘಟನೆಯ ಸಂಪೂರ್ಣ ವಿವರ ಹೊರಬಂದಿದೆ.
ಸಿಸಿಬಿ ಖಜಾನೆಯಲ್ಲಿ 15 ಕೋಟಿ ಇದ್ದ ಹಳೆಯ ನೋಟು ಈಗ 12 ಕೋಟಿ ಮಾತ್ರವೇ ಇದೆ. ಎಸಿಪಿ ಮರಿಯಪ್ಪ ಮೇಲೆ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.