ಪೊಲೀಸರ ಬಲೆಗೆ ಬಿದ್ದ ಇರಾನಿ ಗ್ಯಾಂಗ್ನ ಇಬ್ಬರು ಸರಗಳ್ಳರು
ಬೆಂಗಳೂರು, ಅಕ್ಟೋಬರ್ 13 : ಸಿಸಿಬಿ ಮತ್ತು ಬೆಂಗಳೂರು ನಗರ ಪಶ್ಚಿಮ ವಿಭಾಗದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇರಾನಿ ತಂಡದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತ ಸರಗಳ್ಳರಿಂದ 70 ಲಕ್ಷ ಮೌಲ್ಯದ 2 ಕೆಜಿ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಧಿತರನ್ನು ಅಬುಜರ್ ಅಲಿ (26), ಅಬುಲ್ ಹಸನ್ (23), ಗಿರೀಶ್ ರಾಜೇಗೌಡ ಅಲಿಯಾಸ್ ಬಾಂಬೆ ಗಿರೀಶ್ (38) ಎಂದು ಗುರುತಿಸಲಾಗಿದೆ. ಈ ಆರೋಪಿಗಳ ಪೈಕಿ ಗಿರೀಶ್ ಇರಾನಿ ಗ್ಯಾಂಗ್ ಸದಸ್ಯರು ಕದ್ದು ತರುತ್ತಿದ್ದ ಮಾಲನ್ನು ಖರೀದಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. [ಸರಗಳ್ಳತನ : ಪೊಲೀಸರ ಕಿವಿ ಹಿಂಡಿದ ಸಿದ್ದರಾಮಯ್ಯ]
2013 ರಿಂದ 2015ರ ತನಕ ಬೆಂಗಳೂರು ನಗರದ ವ್ಯಾಪ್ತಿಯ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಆರೋಪಿಗಳು 41ಕ್ಕೂ ಹೆಚ್ಚು ಸರಗಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಬೈಕ್ನಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದ ಇವರು ಮನೆ ಮುಂದೆ ಅಥವ ರಸ್ತೆಯಲ್ಲಿ ಒಂಟಿಯಾಗಿ ಸಂಚಾರ ನಡೆಸುವ ಮಹಿಳೆಯರ ಬಳಿಯಿಂದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. [ಭಾನುವಾರವನ್ನೇ ಟಾರ್ಗೆಟ್ ಮಾಡಿಕೊಂಡ ಸರಗಳ್ಳರು]
ಬಂಧಿತ ಆರೋಪಿಗಳಿಂದ 2 ಕೆಜಿ ಬೆಳೆಬಾಳುವ ಚಿನ್ನಾಭರಣ, ಕಪ್ಪು ಬಣ್ಣದ ಪಲ್ಸರ್ ಮೋಟಾರ್ ಸೈಕಲ್ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿಗಳ ಪೈಕಿ ಅಬುಜರ್ ಅಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿಗಳು ಕಿವಿ ಹಿಂಡಿದ್ದರು : ಕಳೆದ ವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ವಿಫಲರಾದರೆ ಕೇವಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾತ್ರವಲ್ಲ, ಆಯಾ ವಿಭಾಗದ ಉಪ ಪೊಲೀಸ್ ಆಯುಕ್ತರನ್ನೂ ಹೊಣೆಗಾರರನ್ನಾಗಿ ಮಾಡಿ ಅಮಾನತುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.'