ಗಾಲಿ ರೆಡ್ಡಿಗೆ ಮತ್ತೊಂದು ಆಘಾತ, ಮಗಳ ಮದ್ವೆ ಸಿಬಿಐ ತನಿಖೆಗೆ?
ಬೆಂಗಳೂರು, ನವೆಂಬರ್ 8: ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಆಸ್ತಿ ಜಪ್ತಿ ಭೀತಿಯಲ್ಲಿರುವಾಗಲೇ ಮತ್ತೊಂದು ಆಘಾತಕಾರಿ ಸಿಕ್ಕಿದೆ. ಗಾಲಿ ರೆಡ್ಡಿ ಅವರ ಮಗಳ ವೈಭೋಗದ ಮದುವೆ ಬಗ್ಗೆ ಸಿಬಿಐ ತನಿಖೆ ನಡೆಯುವ ಸಾಧ್ಯತೆಯಿದೆ.
ಬೆಂಗಳೂರಿನ ಅರಮನೆ ಆವರಣದಲ್ಲಿ 2016ರ ನವೆಂಬರ್ 16-17ರಂದು ಸುಮಾರು 500 ಕೋಟಿ ರು ವೆಚ್ಚದಲ್ಲಿ ನಡೆದ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆ ಮತ್ತೆ ಸುದ್ದಿಯಲ್ಲಿದೆ. ಈ ಮದುವೆಗೆ ಆದಾಯದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಗಣಿ ಉದ್ಯಮಿ ಟಪಾಲ್ ಗಣೇಶ್ ಎಂಬವರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಜನಾರ್ದನ ರೆಡ್ಡಿ ಜಾಮೀನು ರದ್ದುಗೊಳಿಸಲು ಎಸ್ಐಟಿ ಅರ್ಜಿ
ರೆಡ್ಡಿ ಮಗಳು ಬ್ರಹ್ಮಣಿ ಹಾಗೂ ರಾಜೀವ್ರೆಡ್ಡಿ ಮದುವೆಯ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳ ತಂಡ ರೆಡ್ಡಿ ಅವರ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿದ್ದರು. ನೋಟು ಬ್ಯಾನ್ ಆದ ಸಂದರ್ಭದಲ್ಲಿ ಅಪಾರ ಪ್ರಮಾಣದ ನೋಟುಗಳನ್ನು ಹೇಗೆ ಬಳಕೆ ಮಾಡಲಾಗಿದೆ ಎಂಬ ಪ್ರಶ್ನೆಯೊಂದಿಗೆ ತನಿಖೆ ಮುಂದುವರೆಯಿತು.
ಚಿತ್ರಗಳು : ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ದೀಪಾವಳಿ ಆಚರಣೆ
ಆದರೆ, ಈ ಮದುವೆಗೆ ಬಳಸಲಾದ ಭಾರಿ ಮೊತ್ತದ ನಗದು ಹಣವನ್ನು ಅಪನಗದೀಕರಣ ಯೋಜನೆ ಜಾರಿಗೆ ಬರುವ ಮೊದಲೇ ವರ್ಗಾವಣೆ ಮಾಡಿರುವುದು ಕಂಡು ಬಂದಿತ್ತು.
ಟಪಾಲ್ ಗಣೇಶ್ ಪತ್ರಕ್ಕೆ ಸ್ಪಂದನೆ
ಉದ್ಯಮಿ ಟಪಾಲ್ ಗಣೇಶ್ ಅವರು ಪ್ರಧಾನಿ ಸಚಿವಾಲಯಕ್ಕೆ ಬರೆದಿರುವ ಪತ್ರಕ್ಕೆ ಸಚಿವಾಲಯದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಕೇಂದ್ರ ವಿಚಕ್ಷಣ ದಳದಿಂದ ಈ ಬಗ್ಗೆ ಸಿಬಿಐಗೆ ಪತ್ರ ತಲುಪಿದೆ. ರೆಡ್ಡಿ ಮಗಳ ಅದ್ದೂರಿ ಮದುವೆಗೆ ಆದಾಯದ ಮೂಲದ ಬಗ್ಗೆ ಸಿಬಿಐ ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.
ಮದುವೆ ಬಗ್ಗೆ ಐಟಿ ಇಲಾಖೆಯಿಂದ ತನಿಖೆ
200 ಕೋಟಿ ರು ವೆಚ್ಚದ ಅದ್ದೂರಿ ಮದುವೆಗೆ ಖರ್ಚು ಮಾಡಿದ ಹಣದ ಬಗ್ಗೆ ಸ್ಪಷ್ಟನೆ ಕೋರಿರುವ ಆದಾಯ ತೆರಿಗೆ ಇಲಾಖೆ. ಆದಾಯ ತೆರಿಗೆ 133 (ಎ) ಅನ್ವಯ ವಿಚಾರಣೆ ನಡೆಸಲಾಗುತ್ತಿದೆ.ನವೆಂಬರ್ 8ರಂದು ಕೇಂದ್ರ ಸರ್ಕಾರ 500, 1000 ರೂಪಾಯಿ ನೋಟುಗಳ ಬಳಕೆಯನ್ನು ನಿಷೇಧಿಸಿತ್ತು. ನವೆಂಬರ್ 16-17ರಂದು 500 ಕೋಟಿ ರುಗೂ ಅಧಿಕ ವೆಚ್ಚದಲ್ಲಿ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿಸಲಾಗಿತ್ತು. ಇದಕ್ಕೂ ಮೊದಲು ಬಳ್ಳಾರಿಯಲ್ಲೂ ವೈಭವದಿಂದ ಸಂಪ್ರದಾಯಗಳು ಜರರುಗಿತ್ತು. ಹೀಗಾಗಿ ಗಾಲಿ ರೆಡ್ಡಿ ಬಳಸಿದ ನೋಟುಗಳ ಬಗ್ಗೆ ಪ್ರಶ್ನಿಸಿದ್ದಾರೆ.
ಬಳ್ಳಾರಿಯಲ್ಲಿ ಬರ, ಬೆಂಗಳೂರಲ್ಲಿ ಆಡಂಬರ
ಸುಮಾರು ವರ್ಷಗಳ ನಂತರ ಬಳ್ಳಾರಿಗೆ ವಾಪಸ್ ಬಂದ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿದ್ದು ತಿಳಿದಿರಬಹುದು. ನಂತರ 50-60 ಕೋಟಿ ರು ವೆಚ್ಚದಲ್ಲಿ ಹಾವಂಭಾವಿಯಲ್ಲಿ ಶ್ರೀರಾಮುಲು ಅವರು ನಿರ್ಮಿಸಿರುವ ಮನೆಯ ಗೃಹಪ್ರವೇಶ ಮುಗಿಸಿಕೊಂಡು ಮದುವೆ ಕಾರ್ಯದಲ್ಲಿ ಗಾಲಿ ರೆಡ್ಡಿ ನಿರತರಾಗಿದ್ದರು. ಬಳ್ಳಾರಿಯ ಏಳು ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ, ಬಳ್ಳಾರಿ ನಗರದ ಬಜೆಟ್ 200 ಕೋಟಿ ರು ಒಳಗಿದೆ. ರೆಡ್ಡಿ ಮಗಳ ಮದುವೆ ಬಜೆಟ್ ಮೀರಿ ಸಾಗಿದ್ದು ಎಲ್ಲರ ಕಣ್ಣುಕುಕ್ಕಿತ್ತು.
ಗಾಲಿ ರೆಡ್ಡಿಗೆ ಮತ್ತೆ ತೊಂದರೆ
ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿಂದ ಬಂಧಿಸಲ್ಪಟ್ಟು ಜೈಲು ಸೇರಿ ತದನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಐದು ವರ್ಷಗಳ ನಂತರ ಬಳ್ಳಾರಿಗೆ ಮರಳಿದ್ದರು, ಮಗಳ ಮದುವೆ, ಸಂಕ್ರಾಂತಿ, ದೀಪಾವಳಿ, ವಿಜಯದಶಮಿ ಹಬ್ಬ ಸಂದರ್ಭದಲ್ಲಿ ಬಳ್ಳಾರಿಗೆ ತೆರಳಲು ಅನುಮತಿ ಪಡೆದುಕೊಂಡಿದ್ದರು. ಈಗ ಬೇಲೇಕೇರಿ ಬಂದರು ಪ್ರಕರಣ ಕೂಡಾ ಸುತ್ತಿಕೊಳ್ಳುತ್ತಿದೆ.