ಕಾವೇರಿ ಕುದಿ : ಬೆಂಗಳೂರಿನಾದ್ಯಂತ ಅಭೂತಪೂರ್ವ ಬಂದೋಬಸ್ತ್
ಬೆಂಗಳೂರು, ಸೆಪ್ಟೆಂಬರ್ 20 : ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಕುದಿಯುವ ಹಂತಕ್ಕೆ ತಲುಪಿದ್ದು, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾ. ಉದಯ್ ಯು. ಲಲಿತ್ ಅವರಿರುವ ವಿಭಾಗೀಯ ಪೀಠದ ಮುಂದೆ ಬರಲಿದೆ.
ಸೆಪ್ಟೆಂಬರ್ 12ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ನಂತರ ಬೆಂಗಳೂರಿನಲ್ಲಿ ಭುಗಿಲೆದ್ದಿದ್ದ ದಂಗೆಯನ್ನು ಗಮನದಲ್ಲಿಟ್ಟುಕೊಂಡಿರುವ ಬೆಂಗಳೂರು ಪೊಲೀಸರು ನಗರದಾದ್ಯಂತ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಮತ್ತೆ ಅಂತಹ ಘಟನೆ ನಡೆಯದಿರುವಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಎಂಥದೇ ಘಟನೆ ನಡೆದರೂ ಸಮರ್ಥವಾಗಿ ಎದುರಿಸಲು ಸ್ವಾಟ್ ವಾಹನ ನಗರದಾದ್ಯಂತ ಗಸ್ತು ತಿರುಗುತ್ತಿದೆ. ಪೊಲೀಸರು ಬೈಕ್ ಮೇಲೆ ಕುಳಿತುಕೊಂಡು ಕೈಯಲ್ಲಿ ಮೈಕ್ ಹಿಡಿದು ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಸುತ್ತುತ್ತಿದ್ದಾರೆ. ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡಬಾರದು ಎಂದು ನಾಗರಿಕರಿಗೆ ಕಿವಿಮಾತು ಹೇಳುತ್ತಿದ್ದಾರೆ.
BCP #CitySafe Schools and Colleges are functioning normally. pic.twitter.com/opdMUCfHau
— M.G.N. Kumar (@DcpComdCentre) 20 September 2016
ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರದಂದು, ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರು ಬಿಡಬೇಕೆಂದು ಕರ್ನಾಟಕಕ್ಕೆ ಆದೇಶ ನೀಡುತ್ತಿದ್ದಂತೆ, ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ, ಗೃಹ ಸಚಿವರು ಮಾತುಕತೆ ನಡೆಸಿ, ಸರ್ವ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಿದ್ದರು.
ರಾಪಿಡ್ ಆ್ಯಕ್ಷನ್ ಫೋರ್ಸ್, ಗಡಿ ಭದ್ರತಾ ಪಡೆ, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಮತ್ತು ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಸಿಬ್ಬಂದಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Public announcements regarding section 144 in Hanumanthnagar police station limits pic.twitter.com/H6EckIryqF
— HANUMANTHANAGAR BCP (@Hnagarbcp) 20 September 2016
ಈ ಕಾರಣಗಳಿಂದಾಗಿ ಬೆಂಗಳೂರಿನ ನಾಗರಿಕರು ಯಾವುದೇ ಗಾಳಿಸುದ್ದಿಗೆ ಕಿವಿಗೊಡದೆ ನಿರಾಳವಾಗಿ ಕಚೇರಿಗೆ ತೆರಳಿದ್ದಾರೆ, ನಗರದ ಎಲ್ಲ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಬಸ್ ಮತ್ತಿತರ ಸೇವೆಗಳು ಸರಾಗವಾಗಿ ಕಾರ್ಯನಿರತವಾಗಿವೆ.
ಟ್ವಿಟ್ಟರ್ ನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಪೊಲೀಸ್ ಇಲಾಖೆ, ಯಾವುದೇ ಪ್ರಚೋದನಕಾರಿ ಸಂದೇಶಗಳನ್ನು ನಂಬಬಾರದು ಎಂದು ಹೇಳಿದ್ದು, ಈ ರೀತಿ ಪ್ರಚೋದನಕಾರಿ ಸಂದೇಶ ರವಾನಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.